ಉಡುಪಿ : ಜಿಲ್ಲೆಯ ಬ್ರಹ್ಮಾವರ ಠಾಣೆಯಲ್ಲಿ ಮರಳು ಸಾಗಾಟಕ್ಕಾಗಿ ಲಂಚಕ್ಕಾಗಿ ಕೈಯೊಡ್ಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಪಂದನ ಚಾನೆಲ್ ಇತ್ತೀಚೆಗೆ ರಹಸ್ಯ ಕಾರ್ಯಾಚರಣೆ ಯನ್ನು ಮಾಡಿತ್ತು. ಈ ಕಾರ್ಯಚರಣೆಯ ಮುಂದುವರಿದ ಭಾಗವಾಗಿ ಚಾನೆಲ್ ನ ವಿಶೇಷ ವರದಿಗಾರ ಬ್ರಹ್ಮಾವರ ಠಾಣೆಗೆ ಹೋಗಿದ್ದಾಗ ರಹಸ್ಯ ಕಾರ್ಯಚರಣೆ ಮಾಡುತ್ತಿರುವುದು ಪೊಲೀಸರ ಅರಿವಿಗೆ ಬಂದು ವರದಿಗಾರರ ಮೇಲೆ ಹಲ್ಲೆ ಮಾಡಲಾಗಿತ್ತು ಮತ್ತು ರಹಸ್ಯ ಕಾರ್ಯಚರಣೆಯ ಕ್ಯಾಮರವನ್ನು ಕಿತ್ತುಕೊಳ್ಳಲಾಗಿತ್ತು. ರಹಸ್ಯ ಕಾರ್ಯಚರಣೆಯಲ್ಲಿ ಬ್ರಹ್ಮಾವರ ಸರ್ಕಲ್ ಇನ್ಸ್ ಫೆಕ್ಟರ್ ಅರುಣ್ ನಾಯಕ್ ಮತ್ತು ಕಾನ್ಸ್ಟೇಬಲ್ ಲಂಚಕ್ಕಾಗಿ ಕೇಳಿದ್ದನ್ನು ಸ್ಪಂದನ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಸರ್ಕಲ್ ಇನ್ಸ್ ಫೆಕ್ಟರ್ ಅರುಣ್ ನಾಯಕ್ ಮತ್ತು ಕಾನ್ಸ್ಟೇಬಲ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ಪಂದನ ಚಾನೆಲ್ ಸಿಬ್ಬಂದಿಗಳು ಇಂದು ಮಂಗಳೂರುನಲ್ಲಿ ಐಜಿಪಿ ಯವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯೊಂದಿಗೆ ಸ್ಪಂದನ ಚಾನೆಲ್ ನಡೆಸಿದ ರಹಸ್ಯ ಕಾರ್ಯಚರಣೆಯ ಸಿಡಿಯನ್ನು ಐಜಿಪಿಯವರಿಗೆ ಹಸ್ತಾಂತರಿಸಲಾಗಿದೆ. ಸ್ಪಂದನ ವಾಹಿನಿ ಬ್ಯೂರೋ ಚೀಪ್ ಮೈಮ್ ರಾಮ್ದಾಸ್, ಸ್ಪಂದನ ವಾಹಿನಿ ಸುದ್ದಿ ಸಂಪಾದಕ ವಿನೋದ್ ಪುದು ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.