[1]
ಮಂಗಳೂರು: ಮನರಂಜನೆಯನ್ನು ಬಯಸಿ ಥಿಯೇಟರ್ಗೆ ಬರುವ ಪ್ರೇಕ್ಷಕರಿಗೆ ಚಾಲಿ ಪೋಲಿಲು ತುಳು ಸಿನಿಮಾ ಇಷ್ಟವಾಗಲಿದೆ. ತುಳುರಂಗಭೂಮಿಯ ಬಹಳಷ್ಟು ಕಲಾವಿದರನ್ನು ಚಾಲಿಪೋಲಿಲು ಸಿನಿಮಾದಲ್ಲಿ ಬಳಸಲಾಗಿದೆ ಎಂದು ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್ ತಿಳಿಸಿದರು.
ಜ್ಯೋತಿ ಚಲನ ಚಿತ್ರಮಂದಿರದಲ್ಲಿ ಚಾಲಿಪೋಲಿಲು ಸಿನಿಮಾದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮಾದ್ಯಮಗಳು ಯಾವಾಗಲೂ ನಿಷ್ಠುರವಾದಿಗಳು ಇದ್ದುದನ್ನೇ ಇದ್ದಂತೆ ಹೇಳುವ ಪತ್ರಕರ್ತರು ವಸ್ತುನಿಷ್ಠ ವರದಿಯನ್ನೇ ಪ್ರತಿಪಾದಿಸುತ್ತಾರೆ. ಚಾಲಿಪೋಲಿಲು ಸಿನಿಮಾದ ಬಗ್ಗೆ ಪತ್ರಿಕೆಗಳು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಅವರು ಶುಭ ಹಾರೈಸಿದರು.
ಪ್ರೊಪರ್ಟಿ ಡೆವಲಪರ್ಸ್ ಸಂಸ್ಥೆಯ ಮಾಲಕ ರೋಹನ್ ಮೊಂತೆರೋ ಮಾತನಾಡಿ `ಚಾಲಿಪೋಲಿಲು’ ಸಿನಿಮಾ ಹೆಸರಿನಲ್ಲೇ ಹಾಸ್ಯವನ್ನು ಸೂಚಿಸುತ್ತದೆ. ಈ ಸಿನಿಮಾದಲ್ಲಿ ತುಳುರಂಗಭೂಮಿಯ ಘಟಾನುಘಟಿ ಕಲಾವಿದರಿದ್ದಾರೆ. ಚಿತ್ರ ಯಶಸ್ಸಿಯಾಗಲಿ ಎಂದವರು ಶುಭಹಾರೈಸಿದರು. ಇನ್ ಲ್ಯಾಂಡ್ ಬಿಲ್ಡರ್ಸ್ ನ ಮಾಲಕ ಸಿರಾಜ್ ಅಹ್ಮದ್ ಮಾತನಾಡಿ ಮನರಂಜನೆಯ ಜೊತೆಗೆ ಉತ್ತಮ ಕತೆಯನ್ನು ಹೊಂದಿರುವ ಚಾಲಿಪೋಲಿಲು ಜನರಿಗೆ ಇಷ್ಟವಾಗಲಿದೆ ಎಂದರು.
ಸಂಗೀತ ನಿರ್ದೇಶಕ ವಿ.ಮನೋಹರ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ರೈ, ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ, ಕರ್ನೂರು ಮೋಹನ್ ರೈ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು, ಜಗನ್ನಾಥ ಶೆಟ್ಟಿ ಬಾಳ, ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ದಿವ್ಯಾಶ್ರೀ, ಪ್ರಸನ್ನ ಶೆಟ್ಟಿ ಬೈಲೂರು, ಸರೋಜಿನಿ ಶೆಟ್ಟಿ, ಉಮೇಶ್ ಮಿಜಾರ್, ನವೀನ್ ಶೆಟ್ಟಿ ಅಳಕೆ, ಮೋಹನ್ ಕೊಪ್ಪಲ ತಮ್ಮ ಲಕ್ಷ್ಮಣ ಉಪಸ್ಥಿತರಿದ್ದರು, ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಚಾಲಿಪೋಲಿಲು ಸಿನಿಮಾ ಕರಾವಳಿಯಾದ್ಯಂತ ಏಕಕಾಲದಲ್ಲಿ 10 ಥಿಯೇಟರ್ ಗಳಲ್ಲಿ ಬಿಡುಗಡೆಗೊಂಡಿದೆ. ಮಂಗಳೂರಿನಲ್ಲಿ ಜ್ಯೋತಿ ಭಾರತ್ಮಾಲ್ ಬಿಗ್ ಸಿನಿಮಾ, ಸಿಟಿ ಸೆಂಟರ್ ನಲ್ಲಿ ಸಿನಿಪೊಲಿಸ್, ಪಾಂಡೇಶ್ವರದಲ್ಲಿ ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಬಿ.ಸಿ.ರೋಡ್ ನಲ್ಲಿ ನಕ್ಷತ್ರ, ಬೆಳ್ತಂಗಡಿಯಲ್ಲಿ ಭಾರತ್ ಸಿನಿಮಾ ಮಂದಿರದಲ್ಲಿ ಚಾಲಿಪೋಲಿಲು ಸಿನಿಮಾ ಬಿಡುಗಡೆಗೊಂಡಿದೆ.