ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಆಕೆಯ ತಂದೆ ಗುರುವಾರ ರಾತ್ರಿ ದೂರು ನೀಡಿದ್ದಾರೆ. ಈಕೆ ಕನ್ಯಾನದ ಕಾಲೇಜ್ ವೊಂದರಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದಳು ಆಕೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವುದು ಪರಿಸರದಲ್ಲಿ ಕುತೂಹಲ ಮೂಡಿದೆ.
ಕರೋಪಾಡಿ ಗ್ರಾಮದ ಅರಸಳಿಕೆ ನಿವಾಸಿ ಇಸ್ಮಾಯಿಲ್ ಅವರ ಪುತ್ರಿ ಕಲಂದರ್ ಬೀಬಿ ಸುಮಯ್ಯ(17) ಎಂಬಾಕೆ ಅಪಹರಣಕ್ಕೊಳಗಾದವಳು. ಈಕೆ ಕನ್ಯಾನದಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಲಿ ಯುತ್ತಿದ್ದು, ಸದ್ಯ ಪರೀಕ್ಷೆಗಾಗಿ ಓದಲೆಂದು ರಜೆ ನೀಡಲಾಗಿತ್ತು. ಗುರುವಾರ ಬೆಳಿಗ್ಗೆ ಪರೀಕ್ಷೆಯ ಹಾಲ್ ಟಿಕೆಟ್ ತರಲೆಂದು ಮನೆಯಿಂದ ಬೆಳಿಗ್ಗೆ 9.30ಕ್ಕೆ ತೆರಳಿದ್ದಳು.
ನಿನ್ನೆ ರಾತ್ರಿವರೆಗೂ ಆಕೆ ಮನೆಗೆ ಹಿಂತಿರುಗಿ ಬಂದಿಲ್ಲ. ಇದರಿಂದ ಆತಂಕಕ್ಕೀಡಾದ ಆಕೆಯ ಪೋಷಕರು ಸಂಬಂಧಿಕರ ಹಾಗೂ ಆಕೆಯ ಸ್ನೇಹಿತರ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಬಳಿಕ ರಾತ್ರಿ ಆಕೆಯ ತಂದೆ ಇಸ್ಮಾಯಿಲ್ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಲಕಿ ಎಲ್ಲಿಗೂ ಹೋಗಿರಬಹುದು ಅಥವಾ ಆಕೆಯನ್ನು ಯಾರಾದರೂ ಅಪಹರಣ ಮಾಡಿರಬಹುದು ಎಂಬುದಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಠಾಣಾಧಿಕಾರಿ ಚಂದ್ರಶೇಖರಯ್ಯ ಹಾಗೂ ಸಿಬ್ಬಂದಿ ಬಾಲಕಿಯ ಪತ್ತೆಗಾಗಿ ಹಾಗೂ ಅಪಹರಣ ಮಾಡಿದವರ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಬಾಲಕಿ ಅಪ್ರಾಪ್ತೆಯಾಗಿದ್ದರಿಂದ ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.