ಮಂಗಳೂರು : ಸಿನಿಮಾದೊಳಗೊಂದು ಸಿನಿಮಾ ಕಥೆಯನ್ನು ಹೇಳಿ ಹಾಸ್ಯ, ಪ್ರೇಮ ಹಾಗೂ ಕಲಾವಿದನ ನೈಜ ಜೀವನವನ್ನು ಎಲ್ಲೂ ಬೋರ್ ಹೊಡೆಸದಂತೆ ನಿರ್ದೇಶಿಸಿರುವುದು ಯುವ ನಿರ್ದೇಶಕ ಸಾಯಿಕೃಷ್ಣ ಕುಡ್ಲ ಅವರ ಚಿತ್ರದ ಪ್ಲಸ್ ಪಾಯಿಂಟ್.
ಸಿನಿಮಾ ಸೆಟ್ ನೊಳಗೊಂದು ನಾಟಕ ತಂಡ, ನಾಟಕ ಕಲಾವಿದ ಸಿನಿಮಾ ನಟನಾಗಿ ಅವಕಾಶ ಪಡೆದು ಸಿನಿಮಾ ನಾಯಕಿಯನ್ನು ಪ್ರೀತಿಮಾಡುವ ಸನ್ನಿವೇಶಗಳನ್ನು ಸಾಯಿಕೃಷ್ಣ ಚೆನ್ನಾಗಿ ತೋರಿಸಿದ್ದಾರೆ. ನಾಯಕ ನಟನಿಗೆ ಬೆನ್ನು ಬಿಡದೆ ಕಾಡುವ ಪೈನಾನ್ಸಿಯರ್ ಖಳನಾಯಕನ ಪಾತ್ರ ಸಿನಿಮಾದಲ್ಲಿ ಕ್ಷಣ ಕ್ಷಣವೂ ಕುತೂಹಲವನ್ನು ಮೂಡಿಸಿದೆ.
ಕನ್ನಡ ಚಿತ್ರನಟರಾದ ಬಿರಾದರ್, ಬುಲೆಟ್ ಪ್ರಕಾಶ್ ಕನ್ನಡದಲ್ಲೇ ಸಂಭಾಷಣೆ ಮಾಡಿ ಪ್ರೇಕ್ಷಕನಿಗೆ ಚೆನ್ನಾಗಿ ಮನರಂಜನೆ ಖುಷಿ ಕೊಟ್ಟಿದ್ದಾರೆ, ಶ್ರೀನಗರ ಕಿಟ್ಟಿ ಅತಿಥಿ ಕಲಾವಿದರಾಗಿ ಅಭಿನಯಿಸಿರುವುದು ಚಿತ್ರಕ್ಕೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವೀಯಾಗಿದೆ.
ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು ಪಾತ್ರಗಳು ಅಚ್ಚುಕಟ್ಟಾಗಿ ಪಾತ್ರಕ್ಕೆ ತಕ್ಕಂತೆ ಹಾಸ್ಯದ ಸಂಭಾಷಣೆಗಳು ಶ್ರೀಮಂತವಾಗಿದೆ.
ಹೊಸ ಪ್ರತಿಭೆ ರಾಹುಲ್ ನಾಯಕ ನಟ ಪಾತ್ರಕ್ಕೆ ಸರಿಯಾದ ಜೀವತುಂಬಿದ್ದಾರೆ. ನಾಯಕಿಯಾಗಿ ಮುಂಬೈಯ ಕಿರುತೆರೆ ನಟಿ ಶ್ರೀತಮ ಮುಖರ್ಜಿ ಅಭಿನಯ ಪರವಾಗಿಲ್ಲ. ನಿರ್ಮಾಪಕರಾದ ಕಿಶೋರ್ ಕೊಟ್ಟಾರಿ, ಶ್ವೇತಾ ಕೊಟ್ಟಾರಿ ನಿರ್ಮಾಣದ ಜವಾಬ್ದಾರಿಯಲ್ಲಿ ಎಲ್ಲೂ ರಾಜಿಮಾಡದೆ ಸಿನೆಮಾವನ್ನು ಗುಣಮಟ್ಟವನ್ನು ಶ್ರೀಮಂತವಾಗಿಸಿದ್ದಾರೆ.
ಪಿ.ಎಲ್.ರವಿ ಅವರ ಛಾಯಾಗ್ರಹಣ, ಮದನ್ ಹರಿಣಿ, ದೇವ ಸಂಪತ್ತು, ಸದಾ ಅವರ ನೃತ್ಯ ಸಂಯೋಜನೆ ಇತಿ ಮಿತಿಯಾಗಿ ಚೆನ್ನಾಗಿದೆ. ಸನ್ನಿವೇಷಕ್ಕೆ ತಕ್ಕಂತೆ ಎಡ್ಬರ್ಗ್ ದಿಲೋನ್ ಅವರ ಸಂಗೀತ ಬೋರ್ ಹೊಡೆಸದೆ ಕುತೂಹಲಕಾರಿಯಾಗಿತ್ತು.
ಸಾಹಿತಿ ಶಶಿರಾಜ್ ಕಾವೂರು ಅವರ ಸಾಹಿತ್ಯಕ್ಕೆ ತಕ್ಕಂತೆ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕ ರಾಜೇಶ್ ಕೃಷ್ಣನ್, ಜೋಗಿ ಸುನೀತಾ, ಸುಪ್ರಿಯಾ ಲೋಹಿತ್, ವಿಸ್ಮಯ ವಿನಾಯಕ್, ಧನಂಜಯ ವರ್ಮ ಹಾಗೂ ದೇವದಾಸ್ ಕಾಪಿಕಾಡ್ ಅವರು ಹಾಡಿಗೆ ಧ್ವನಿ ನೀಡಿದ್ದಾರೆ.
ಸೂಂಬೆ ಚಿತ್ರ ಹೊಸ ಪ್ಯಾಶನ್ ನಲ್ಲಿ ಮೂಡಿ ಬಂದ ಉತ್ತಮ ತುಳು ಚಿತ್ರವಾಗಿದೆ.