ಎಡನೀರು: ಭಾರತೀಯ ಸಂಸ್ಕೃತಿ,ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಕಾರ್ಯನಡೆಯಬೇಕು. ಅಂತಹ ಉತ್ತಮ ಕಾರ್ಯಗಳನ್ನು ಕನ್ನಡ ಸಂಸ್ಕೃತಿ ಶಿಬಿರಗಳನ್ನು ನಡೆಸುವ ಮೂಲಕ ಭೂಮಿಕಾ ಪ್ರತಿಷ್ಠಾನ ಮಾಡುತ್ತಿದೆ ಎಂದು ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ನುಡಿದರು.
ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಆವರಣದಲ್ಲಿ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ(ರಿ.)ಆಶ್ರಯದಲ್ಲಿ ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ ಸಹಯೋಗದೊಂದಿಗೆ ಆಯೋಜಿಸಲಾದ ಐದು ದಿನಗಳ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ಸಂಸ್ಕೃತಿ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ರಂಗಭಾರತಿ ಮಂಗಳೂರು ಇದರ ನಿರ್ದೇಶಕ ಕೆ.ವಿ.ರಮಣ್, ನಿವೃತ್ತ ಶಿಕ್ಷಕ ಹಿರಿಯ ಕಲಾವಿದ ಕೆ.ಚಂದ್ರಶೇಖರ ಭಟ್ ಆದೂರು, ಹಿರಿಯ ಕಲಾವಿದ ಗೋಪಾಲಕೃಷ್ಣ ಭಟ್ ಪೆರಡಂಜಿ, ಉಡುಪುಮೂಲೆ ಗೋಪಾಲಕೃಷ್ಣ ಭಟ್ ಅತಿಥಿಗಳಾಗಿದ್ದರು.
ಭೂಮಿಕಾ ಪ್ರತಿಷ್ಠಾನದ ನಿರ್ದೇಶಕಿ ವಿದುಷಿ ಅನುಪಮಾ ರಾಘವೇಂದ್ರ ಹಾಗೂ ಉಡುಪುಮೂಲೆ ರಾಘವೇಂದ್ರ ಭಟ್ ಶ್ರೀಗುರುಗಳಿಗೆ ಫಲ ಸಮರ್ಪಿಸಿದರು. ಅನುಪಮಾ ರಾಘವೇಂದ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಡ್ಕ ಸುಬ್ರಹ್ಮಣ್ಯ ಭಟ್ ವಂದಿಸಿದರು.