ಮಂಗಳೂರು : ಸೈಬರ್ ಸೆಕ್ಯುರಿಟಿ ಮತ್ತು ಅಂತರ್ಜಾಲದಲ್ಲಿ ಮೋಸ ಹೋಗದಿರಲು ನಿರಂತರವಾಗಿ ಆರಕ್ಷಕ ಇಲಾಖೆಯಿಂದ ಹಾಗೂ ಬ್ಯಾಂಕ್ಗಳಿಂದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅಪರಿಚಿತರ ದೂರವಾಣಿ ಕರೆ/ಇ-ಮೇಲ್/ಮೊಬೈಲ್ ಎಸ್.ಎಂ.ಎಸ್ ಮುಖಾಂತರ ಬ್ಯಾಂಕ್ ಖಾತೆಯ ವೈಯಕ್ತಿಕ ವಿವರಗಳನ್ನು (ಖಾತೆ ವಿವರ, ಎ.ಟಿ.ಎಂ/ಡೆಬಿಟ್ ಕಾರ್ಡ್ ಸಂಖ್ಯೆ, ಗುಪ್ತ ಸಂಕೇತ(Password/pin), ಸಿ.ವಿ.ಸಿ ಸಂಖ್ಯೆಗಳನ್ನು ಕೇಳಿದಾಗ ಸಾರ್ವಜನಿಕರು ಅವರಿಗೆ ನೀಡಿ ಅಂತಹ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಅಪರಾಧಿಗಳು ಉಪಯೋಗಿಸಿಕೊಂಡು ಬ್ಯಾಂಕ್ ಖಾತೆಯಿಂದ ಹಣ ಪಡೆಯುವುದು, ಆನ್-ಲೈನ್ ಶಾಪಿಂಗ್ ಮಾಡುವುದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ.
ಉದಾ: 1. ಪುಂಜಾಲಕಟ್ಟೆ ಪೊಲೀಸ್ ಠಾಣಾ ಅ.ಕ್ರ.ಸಂಖ್ಯೆ: 78/15 ಕಲಂ 420 ಐ.ಪಿ.ಸಿ ಮತ್ತು ಕಲಂ 66 (ಸಿ), 66 (ಡಿ) ಐ.ಟಿ ಕಾಯ್ದೆ 2000, ಪ್ರಕರಣದಲ್ಲಿ ಓರ್ವ ವ್ಯಕ್ತಿಯು ಕೆನರಾ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದು, ನಂತರ ಬ್ಯಾಂಕಿನಿಂದ ಎ.ಟಿ.ಎಂ ಕಾರ್ಡ್ ಪಡೆದುಕೊಂಡಿರುತ್ತಾರೆ ಹಾಗೂ ಖಾತೆಯಲ್ಲಿ 3 ಲಕ್ಷ ಜಮೆ ಮಾಡಿರುತ್ತಾರೆ. ಯಾರೋ ಅನಾಮಧೇಯ ವ್ಯಕ್ತಿಯು ತಾನು ಕೆನರಾ ಬ್ಯಾಂಕ್ನ ಪ್ರಧಾನ ಕಛೇರಿಯಿಂದ ಕರೆ ಮಾಡುತ್ತಿದ್ದು, ನಿಮ್ಮ ಎ.ಟಿ.ಎಂ ಕಾರ್ಡ್ ಆಕ್ಟಿವೇಶನ್ ಆಗಿಲ್ಲ ಅದರ ಸೀಕ್ರೆಟ್ ನಂಬರ್ ನೀಡುವಂತೆ ದೂರವಾಣಿ ಮುಖಾಂತರ ಕೇಳಿರುತ್ತಾರೆ. ಸದರಿ ವ್ಯಕ್ತಿಯು ಕೇಳಿದಂತಹ ಖಾತೆಯ ವಿವರಗಳನ್ನು ನೀಡಿದ್ದು, ನಂತರ ರೂ 70,000/- ಖಾತೆಯಿಂದ ಕಡಿತಗೊಂಡಿರುತ್ತದೆ.
2. ಇದೇ ರೀತಿ ಕೆಲವರಿಗೆ ನೀವು ಉದ್ಯೋಗಕ್ಕೆ ಆಯ್ಕೆಯಾಗಿರುತ್ತೀರಿ ಮುಂಚಿತವಾಗಿ ರೂ 50,000/- ಸಂದಾಯ ಮಾಡುವಂತೆ ಹಾಗೂ ಯಾವುದೋ ಒಂದು ಕಂಪನಿಯ ಹೆಸರನ್ನು ಹೇಳಿ ನೀವು ಸದರಿ ಕಂಪನಿಯಿಂದ ಬಹುಮಾನ ಗಳಿಸಿರುತ್ತೀರಿ ಮುಂಚಿತವಾಗಿ ಹಣ ಸಂದಾಯ ಮಾಡುವಂತೆ ಇಮೇಲ್ ಮುಖಾಂತರ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಸದರಿ ಸಂದೇಶಗಳಿಗೆ ಸ್ಪಂದಿಸುವ ಮುಂಚಿತವಾಗಿ ಅದರ ಸರಿಯಾದ ಮಾಹಿತಿ ಖಚಿತಪಡಿಸಿದ ನಂತರವಷ್ಟೇ ವ್ಯವಹರಿಸಲು ಸಾರ್ವಜನಿಕರಿಗೆ ಕೋರಿದೆ. ಇಂತಹ ಸಂದೇಶಗಳಿಗೆ ಮೋಸ ಹೋಗುವ ಸಾಧ್ಯತೆಗಳು ತುಂಬಾ ಹೆಚ್ಚಿರುತ್ತವೆ.
ಸಾರ್ವಜನಿಕರು ಈ ರೀತಿಯ ಅನಾಮಧೇಯ ಕರೆ, ಇ-ಮೇಲ್ ಸಂದೇಶಗಳಿಗೆ ಮೋಸ ಹೋಗುತ್ತಿದ್ದು ದೂರು ನೀಡಲು ಹಿಂಜರಿಯುತ್ತಿರುವ ಘಟನೆಗಳು ನಡೆಯುತ್ತಿವೆ.