ಮಂಗಳೂರು: ಮಂಗಳೂರಿನ ಹೃದಯಭಾಗದ ನೆಹರೂ ಮೈದಾನದ ಧ್ವಜ ಸ್ತಂಭದ ಬಳಿ ಜವಾಹರಲಾಲ್ ನೆಹರೂ ಅವರ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ನೆಹರೂ ಅವರ ಪ್ರತಿಮೆ ನಿರ್ಮಾಣದ ಕುರಿತು ಮಂಗಳವಾರ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಚಿವರು ಅಧಿಕಾರಿಗಳ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ನೆಹರೂ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಮೈದಾನದ ನೆಹರೂ ಮೈದಾನದಲ್ಲಿ ಪ್ರತಿಮೆ ಸ್ಥಾಪಿಸಲಾಗುತ್ತದೆ. ಇಲ್ಲಿ ನಡೆಯುವ ಕ್ರೀಡಾ ಚಟುವಟಿಕೆ ಹಾಗೂ ಇತರ ಸಂದರ್ಭ ಯಾರಿಗೂ, ಯಾವುದೇ ಸಮಸ್ಯೆ ಆಗದಂತೆ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದರು.
ಪ್ರಸಕ್ತ ನೆಹರೂ ಮೈದಾನದಲ್ಲಿರುವ ಧ್ವಜಸ್ತಂಭವನ್ನೂ ನವೀಕರಿಸುವಂತೆ ಸೂಚಿಸಲಾಗಿದೆ. ಶೀಘ್ರದಲ್ಲಿ ಈ ಕುರಿತ ವರದಿಯನ್ನು ಜಿಲ್ಲಾಡಳಿತದಿಂದ ಪಡೆದುಕೊಂಡು, ಯೋಜನೆ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ನೆಹರೂ ಪ್ರತಿಮೆ ಅನಾವರಣ ಹಾಗೂ ಧ್ವಜಸ್ತಂಭ ನವೀಕರಣದ ಜತೆಗೆ ಮೈದಾನದ ಸುವ್ಯವಸ್ಥೆಗೂ ಆದ್ಯತೆ ನೀಡಲಾಗುವುದು. ಮೈದಾನದ ನಾಲ್ಕೂ ಭಾಗದಲ್ಲಿ ಬೇಲಿ ನಿರ್ಮಾಣ ಹಾಗೂ ಸುವ್ಯವಸ್ಥಿತಗೊಳಿಸುವ ಕಾರ್ಯ ಮಾಡಲಾಗುವುದು ಎಂದು ಅವರು ವಿವರಿಸಿದರು.
ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಮನಪಾ ಆಯುಕ್ತ ಡಾ| ಎಚ್.ಎನ್. ಗೋಪಾಲಕೃಷ್ಣ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.