ಮಂಗಳೂರು: ಶ್ರೀ ಮಂಗಳಾಂಬಿಕಾ ಪ್ರೊಡಕ್ಷನ್ ಪುತ್ತೂರು ಲಾಂಛನದಲ್ಲಿ ನಿರ್ಮಾಣವಾಗಿರುವ ’ರೈಟ್ ಬೊಕ್ಕ ಲೆಫ್ಟ್-ನಡುಟು ಕುಡೊಂಜಿ’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭ ನ. 5ರಂದು ಬೆಳಗ್ಗೆ 9.00ಕ್ಕೆ ಮಂಗಳೂರಿನ ಜೋತಿ ಚಿತ್ರಮಂದಿರದಲ್ಲಿ ಜರಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 10 ಚಿತ್ರ ಮಂದಿರಗಳಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಗೊಳ್ಳಲಿದೆ. ಜೀವನದಲ್ಲಿ ಸೋತ ವ್ಯಕ್ತಿಯೊಬ್ಬ ಹೇಗೆ ಯಶಸ್ಸು ಸಾಧಿಸುತ್ತಾನೆ ಎಂಬ ಒಳ್ಳೆಯ ಚಿತ್ರಕಥೆಯನ್ನು ರೈಟ್ ಬೊಕ್ಕ ಲೆಫ್ಟ್ ಸಿನಿಮಾ ಹೊಂದಿದೆ.
’ಬಲೆ ತೆಲಿಪಾಲೆ’ ಖ್ಯಾತಿಯ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಈ ಚಿತ್ರದ ನಾಯಕ. ಛಾಯಾ ಹರ್ಷ, ನಮಿತಾ ಶರಣ್ ಮತ್ತು ಮೊಹೈರ್ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಉತ್ತಮ ಚಿತ್ರಕತೆ, ಅದಕ್ಕೆ ಪೂರಕ ಹಾಸ್ಯದೊಂದಿಗೆ ಅತ್ಯುತ್ತಮವಾಗಿ ಮೂಡಿಬಂದಿರುವ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಸನ್ನ ಶೆಟ್ಟಿ ಬೈಲೂರು, ರಂಗಭೂಮಿ ಕಲಾವಿದ ಶ್ರೀಪಾದ ಹೆಗ್ಡೆ, ಕುಂಬ್ರ ದಯಾಕರ ಆಳ್ವ ತೋನ್ಸೆ ವಿಜಯಕುಮಾರ್ ಶೆಟ್ಟಿ ಮರ್ವಿನ್ ಪ್ರಮುಖ ಪಾತ್ರದಲ್ಲಿದ್ದಾರೆ. ಜೋಮ್ಲು ತೀರ್ಥ ಮತ್ತು ಕಾರಿಂಜ ದೇವಸ್ಥಾನದ ಹೊರಾಂಗಣ ಸೌಂದರ್ಯ ಹಾಡಿನ ದೃಶ್ಯದಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಚಿತ್ರ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಚಿತ್ರೀಕರಣಗೊಂಡಿದೆ. ಹೆಚ್ಚಿನ ಎಲ್ಲ ಕಲಾವಿದರು ಹೊಸಬರು. ಹೊಸಬರಿಂದ ಹೊಸ ಬಗೆಯ ಚಿತ್ರ ಮಾಡಿದ ಸಂತೃಪ್ತಿ ಇದೆ. ತುಳು ಚಿತ್ರರಂಗದಲ್ಲಿ ’ರೈಟ್ ಬೊಕ್ಕ ಲೆಫ್ಟ್’ ಹೊಸದೊಂದು ಅಲೆ, ಹೊಸ ಆಯಾಮ ಉಡುಪಿ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಿ.ಸಿ. ರೋಡ್, ಸುಳ್ಯ ಮತ್ತು ಕಾಸರಗೋಡಿನಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ನ. ೮ರಂದು ಮುಂಬಯಿನ ಡೊಂಬಿವಿಲಿ ಸಾವಿತ್ರಿಬಾಯಿ ಪುಲೆ ಸಭಾಂಗಣದಲ್ಲಿ ಕೂಡ ಪ್ರದರ್ಶನಗೊಳ್ಳಲಿದೆ. ಡಾ| ನಿತಿನ್ ಆಚಾರ್ಯ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು, ನೃತ್ಯ: ಪ್ರಶಾಂತ್, ಕಲಾನಿರ್ದೇಶನ: ದಯೇಶ್ ಪಡುಬಿದ್ರೆ, ಸಾಹಿತ್ಯ, ಸಂಭಾಷಣೆ, ಸಂಕಲನ, ಛಾಯಾಗ್ರಹಣವನ್ನು ಕೂಡ ನಿರ್ದೇಶಕ ಯತೀಶ್ ಆಳ್ವ ಅವರೇ ನಿರ್ವಹಿಸಿದ್ದಾರೆ. ಚಂದ್ರಶೇಖರ ರೈ ಕಲ್ಲಡ್ಕ ಚಿತ್ರದ ನಿರ್ಮಾಪಕರಾಗಿದ್ದಾರೆ.