ಮಂಗಳೂರು : ಅಡಿಕೆ ಕೃಷಿಯಿಂದ ಆಹಾರ ಬೆಳೆಯನ್ನು ಬೆಳೆಯಲು ಉತ್ಸುಕರಾಗಿರುವ ರೈತರಿಗೆ ಪ್ರೋತ್ಸಾಹ ನೀಡಲು ಸರ್ಕಾರ ರೈತರಿಗಾಗಿ ಪೈಲಟ್ ಯೋಜನೆಯನ್ನು ರೂಪಿಸಬೇಕು ಎಂದು ರೈತ ಮುಖಂಡರಲ್ಲೊಬ್ಬರಾದ ಶ್ರೀ ರವಿಕಿರಣ ಪುಣಚ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡುತ್ತಿದ್ದರು. ಸಾಲಮನ್ನಾ ಯೋಜನೆ, ಅಡಿಕೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ, ಹಳದಿರೋಗ, ಕೊಳೆ ರೋಗ ತಡೆಗೆ ಕ್ರಮ, ಕುಮ್ಕಿ ಜಮೀನು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ರೈತರು ಜಿಲ್ಲಾಡಳಿತದ ಗಮನ ಸೆಳೆದರು.
ರೈತರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಜಪ್ತಿ ವಿಷಯದಲ್ಲಿ ಪ್ರತಿಯೊಂದು ಪ್ರಕರಣದ ಹಿನ್ನಲೆಯನ್ನು ಅರ್ಥೈಸಿ ನಿರ್ಧಾರ ಕೈಗೊಳ್ಳಬೇಕೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಿದರು. ಅಡಿಕೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಬಗ್ಗೆ ಕ್ಯಾಂಪ್ಕೊದ ಸಲಹೆಯನ್ನು ಕೋರಿದರು. ಈ ಸಂಬಂಧ ಕ್ಯಾಂಪ್ಕೊ, ತೋಟಗಾರಿಕ ಇಲಾಖೆ, ರೈತರ ಜೊತೆ ಚರ್ಚಿಸಿ ಸಮರ್ಪಕ ನಿರ್ಧಾರ ತೆಗೆದುಕೊಳ್ಳಲು ಸೂಚಿಸಿದರು. ಬಳಿಕ ಸರ್ಕಾರಕ್ಕೆ ಈ ಸಂಬಂಧ ವರದಿ ಕಳುಹಿಸುವುದಾಗಿ ನುಡಿದರು. ಕೃಷಿ ಸಾಲ ಜಪ್ತಿಯ ಸಂಬಂಧ ಲೀಡ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಸಹಕಾರಿಗಳ ಜೊತೆ ಸಭೆ ನಡೆಸಿ ನಿರ್ಣಯ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಉದ್ಯೋಗ ಖಾತರಿ ಯೋಜನೆ ಬಗ್ಗೆ ಸಮಗ್ರ ಮಾಹಿತಿ ರೈತರಿಗೆ ನೀಡುವಂತೆ, ಕೆಲಸವಾದ ಕಡೆ ಹಣ ಬಿಡುಗಡೆ ಮಾಡುವ ಸಂಬಂಧ ರೈತರ ಪ್ರಶ್ನೆಗಳಿಗೆ ಸಹಾಯಕ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಮಸಗುಪ್ಪಿ ಅವರು ಉತ್ತರಿಸಿದರು.
ಸಭೆಯಲ್ಲಿ ಎಂಡೋಸಲ್ಫಾನ್ ನಿಷೇಧಕ್ಕೆ ಒತ್ತಾಯಿಸಿದ ರೈತರು, ಈ ಬಗ್ಗೆ ನೀಡಿರುವ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೋರಿದರು. 220 ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸಲಾಗಿದ್ದು, 50.000 ರೂ. ಪರಿಹಾರ ನೀಡಿದೆ. ಶೇ. 75ರಷ್ಟು ಅಂಗವಿಕಲರು ಮತ್ತು ಶೇ. 75ರಷ್ಟು ಅಂಗವಿಕಲರಲ್ಲಿ 135 ಜನರಿಗೆ ವಿಶೇಷ ಪೆನ್ಷನ್ ನೀಡಿದೆ. ಕೊಕ್ಕಡದಲ್ಲಿ ಇಂತಹವರಿಗಾಗಿಯೇ ಡೇ ಕೇರ್ ಸೆಂಟರ್ ತೆರೆಯಲಾಗಿದ್ದು, ಡಾಕ್ಟರ್ ಗಳು ಮತ್ತು ಎಲ್ಲ ಮೂಲ ಸೌಲಭ್ಯಗಳನ್ನು ಏರ್ಪಡಿಸಿದ್ದು ಇವರನ್ನು ಮನೆಗಳಿಂದ ಕರೆದೊಯ್ಯಲು ಮನೆಗಳಿಗೆ ಬಿಡಲು ಬಸ್ ಸೌಲಭ್ಯವನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸೆಜ್ ಬಗ್ಗೆ, ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಮುಳುಗಡೆಯಾಗುವ ರೈತರ ಭೂಮಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಸುವರ್ಣ ಭೂಮಿ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ಪದ್ಮಯ್ಯ ನಾಯ್ಕ್ ಅವರು ಮಾಹಿತಿ ನೀಡಿದರು . ಕೃಷಿ, ಜಲಾನಯನ, ಪಶುಸಂಗೋಪನೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English