[1]ಮಂಗಳೂರು : ಭಾರತ ಆಡಳಿತ ಸೇವೆ ಖಾಯಂ ಪೂರ್ವ ಅವಧಿ (ಪ್ರೊಬೇಷನರಿ)ಸೇವೆಗೆ ದಕ್ಷಿಣಕನ್ನಡ ಜಿಲ್ಲೆಗೆ ನಿಯೋಜಿಸಿದ ತಮಗೆ ಜಿಲ್ಲೆಯಲ್ಲಿ ವಿಶಿಷ್ಟವಾದ ಉತ್ತಮ ಆಡಳಿತ ಅನುಭವ ಆಗಿದೆ. ಇದರಿಂದ ನನ್ನ ಮುಂದಿನ ಸರ್ಕಾರಿ ಸೇವೆಗೆ ಬಹಳಷ್ಟು ನೆರವಾಗಲಿದೆ ಎಂದು ಐಎಎಸ್ ಪ್ರೊಬೇಷನರಿ ಜಿಲ್ಲಾಧಿಕಾರಿ ಶ್ರೀಮತಿ ರೋಹಿಣಿ ಸಿಂಧೂರಿ ಅವರು ಜಿಲ್ಲೆಯ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವರು ಇಂದು ಪ್ರೋಬೆಷನರಿ ಅವಧಿ ಮುಗಿಸಿದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.
ಇಲ್ಲಿಯ ಜನ ಅಧಿಕಾರಿಗಳು ಎಲ್ಲರೂ ನನಗೆ ಉತ್ತಮ ಪ್ರಾಮಾಣಿಕ ಆಡಳಿತ ನಡೆಸಲು ತಮ್ಮದೇ ಆದ ಮಾರ್ಗದರ್ಶನ ನೀಡಿದ್ದಾರೆಂದು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರು ಮಾತನಾಡಿ ಪ್ರೊಬೇಷನರಿ ಅವಧಿಯಲ್ಲಿ ಶ್ರೀಮತಿ ರೋಹಿಣಿಯವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಯಾವುದೇ ಹಂತದಲ್ಲೂ ಸ್ಥಿಮಿತ ಕಳೆದುಕೊಳ್ಳದೆ ಕರ್ತವ್ಯ ನಿರ್ವಹಿಸಿರುತ್ತಾರೆ. ಇದೇ ರೀತಿ ಮುಂದೆಯೂ ದೃಢ ನಿರ್ಧಾರದಿಂದ ಕಾರ್ಯನಿರ್ವಹಿಸಲು ಸೂಚಿಸಿದರು.