[1]ಮಂಗಳೂರು : ಮಂಜನಾಡಿ ಗ್ರಾಮದ ನಾಟೆಕಲ್ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಮಂಜನಾಡಿ, ರಕ್ಷಾ ಸಮಿತಿ ಪ್ರಾಥಮಿಕ ಆರೋಗ್ಯ ಕೇಂದ್ರ ನಾಟೆಕಲ್ ಇಲ್ಲಿ ಸುಮಾರು 1ಕೋಟಿ. ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡಕ್ಕೆ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಲಿ ಶಂಕುಸ್ಥಾಪನೆಗೈದರು.
[2]ಬಳಿಕ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಮುದ್ರ ಸೇರುವ ನದಿ ನೀರಿಗೆ ಅಲ್ಲಲ್ಲಿ ಅಣೆಕಟ್ಟು ನಿರ್ಮಿಸಿ, ಸಂಗ್ರಹವಾದ ನೀರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ವ್ಯರ್ಥವಾಗಿ ಪೋಲಾಗುವ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ಜಿಲ್ಲೆಯ ಕುಡಿಯುವ ನೀರು ಹಾಗೂ ಆರೋಗ್ಯದ ಸಮಸ್ಯೆ ನೀಗಿಸಲು ಸಾಧ್ಯ ಎಂದು ಮೊಲಿ ಹೇಳಿದರು.
ನಮ್ಮ ಆರೋಗ್ಯವನ್ನು ಕಾಪಾಡಲು ಶೇ.75ರಷ್ಟು ಕುಡಿಯುವ ನೀರು ಶುದ್ಧವಾಗಿಡಬೇಕು. ನೀರಿನಿಂದ ಬಂಜರು ಭೂಮಿಯನ್ನು ಕೃಷಿ ಭೂಮಿಯನ್ನಾಗಿಸಬಹುದು ಎಂದು ನುಡಿದರು.
ಉಭಯ ಜಿಲ್ಲೆಗಳ ಕುಡಿಯುವ ನೀರಿಗಾಗಿ 485ಕೋಟಿ. ರೂ.ಗಳ ಯೋಜನೆ ತಯಾರಿಸಲಾಗಿದ್ದು, ಸದ್ಯದಲ್ಲೇ ಆರಂಭವಾಗಲಿದೆ, ಶಾಸಕ ಯು.ಟಿ.ಖಾದರ್ ಅವರು ಈ ಯೋಜನೆಗಾಗಿ ಶ್ರಮ ವಹಿಸಿರುವುದನ್ನು ಸ್ಮರಿಸಿದರು.
ತುಂಬೆಯಲ್ಲಿ ಡ್ಯಾಂ ನಿರ್ಮಿಸುವಾಗ, ಎಂಆರ್ಪಿಎಲ್ ಸ್ಥಾಪಿಸುವಾಗ, ವಿದ್ಯುತ್ ಸ್ಥಾವರ ನಿರ್ಮಿಸಲು ಮುಂದಾದಾಗ ಎಲ್ಲಡೆಯಿಂದ ವಿರೋಧ ವ್ಯಕ್ತವಾಗಿತ್ತು. ನಂತರ ಜನ ಒಪ್ಪಿಕೊಂಡು ಅದು ಕಾರ್ಯಗತವಾಯಿತು, ರೈತರನ್ನು ಯೋಜನೆಗಳಲ್ಲಿ ಸೇರಿಸಿ ಮನದಟ್ಟು ಮಾಡಿದಲ್ಲಿ ಮಾತ್ರ ಯೋಜನೆಗಳು ಸಫಲವಾಗಲು ಸಾದ್ಯ ಎಂದರು.
ಶಾಸಕ ಯು.ಟಿ.ಖಾದರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಕೇಂದ್ರ ಬಹಳ ಉಪಯುಕ್ತವಾಗಿದ್ದು ನಾಟೆಕಲ್ನಲ್ಲಿ ನಿರ್ಮಾಣವಾಗುತ್ತಿರುವ ಈ ಕೇಂದ್ರಕ್ಕೆ ಸ್ಥಳದಾನ ಮಾಡಿದ ಹಾಜಿ ಪಿ.ಎಸ್.ಮೊದಿನ್ ಕುಂಞಿ ಅವರನ್ನು ಸ್ಮರಿಸಿದರು.
ಜನರು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಮಾತ್ರ ಯೋಜನೆ ಸಾರ್ಥಕವಾಗುವುದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆರೋಗ್ಯದ ಮುತುವರ್ಜಿಯಲ್ಲಿ ಬಹಳಷ್ಟು ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.
ಸ್ಥಳದಾನಿ ಪಿ.ಎಸ್.ಮೊದಿನ್ ಕುಂಞಿ ಅವರ ಪುತ್ರ ಅಬೂಬಕ್ಕರ್ ಹಾಜಿ ನಾಟೆಕಲ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಭವ್ಯಾ ಗಂಗಾಧರ್ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಎನ್.ಎಸ್.ಕರೀಂ, ತಾಲೂಕು ಪಂಚಾಯತ್ ಸದಸ್ಯ ಅಹ್ಮದ್ ಕುಂಞಿ, ಹಾಜಿ ಇಬ್ರಾಹಿಂ ಕೋಡಿಜಾಲ್, ಉಳ್ಳಾಲ ಸಯ್ಯಿದ್ ಮದನಿ ದುರ್ಗಾ ಸಮಿತಿ ಅಧ್ಯಕ್ಷ ಯು.ಕೆ.ಮೋನು, ಮಂಜನಾಡಿ ಗ್ರಾಮ ಪಂಚಾಯತ್ ಉಪಾರ್ಧಯಕ್ಷೆ ಸರೋಜಿನಿ, ಸದಸ್ಯ ಹಸೈನಾರ್, ಎಂ.ಅಬ್ಬಾಸ್, ಪದ್ಮಾವತಿ ಉಪಸ್ಥಿತರಿದ್ದರು.