ಉಪ್ಪಳ : ತಡೆಗೋಡೆ ಒಡೆದು ಕೃಷಿ ಸ್ಥಳಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಪೈವಳಿಕೆ ಪಂಚಾಯತಿನ ಕುಡಾಲ್ಮೇರ್ಕಳದಲ್ಲಿ ನೂರು ಎಕರೆ ಕೃಷಿ ಸ್ಥಳ ನಾಶವಾಗಿದೆ.
ದಶಕದ ಹಿಂದೆ ಕಿರು ನೀರಾವರಿ ಯೋಜನೆಯಂಗವಾಗಿ ನಿರ್ಮಿಸಿದ ತಡೆಗೋಡೆ ಒಡೆದು ನಾಲ್ಕು ವರ್ಷಗಳಾದರೂ ಅದನ್ನು ಪುನರ್ ನಿರ್ಮಿಸುವ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿಕರ, ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ಗದ್ದೆಗಳಲ್ಲಿ ನಡೆಯುತ್ತಿದ್ದ ಪರಂಪರಾಗತ ಕೃಷಿಗೆ ತಡೆಯುಂಟಾಗಿದೆ.
ತಡೆಗೋಡೆ ಒಡೆದ ಪರಿಣಾಮವಾಗಿ ತೋಡಿನ ಗತಿ ಬದಲಾಗಿದ್ದು,ಕೃಷಿ ಸ್ಥಳಗಳಲ್ಲಿ ನೀರಿನ ಜತೆ ಕಲ್ಲು, ಮಣ್ಣು,ಮರಳು ತುಂಬಿ ನಿಂತಿದೆ. ಕೃಷಿಕರು ಬೆಳೆಯಿಲ್ಲದೆ ಕಂಗಲಾಗಿದ್ದಾರೆ. ನೀರು ನುಗ್ಗಿ ಎಲ್ಲವೂ ನಾಶವಾಗಿದೆ.
ನೀರಿಗಾಗಿ ಜನರು ಹಾತೊರೆಯುತ್ತಿರುವಾಗ ಇಲ್ಲಿ ನೀರು ಪೋಲಾಗುತ್ತಿರುವುದನ್ನು ಕಾಣಬಹುದು. ಕೃಷಿ ಮಾಡಲು ಅವಕಾಶವಿರುವ ಸ್ಥಳ ಕೆಸರು ನಿಂತು ಉಪಯೋಗ ಶೂನ್ಯವಾಗಿದೆ. ಈ ಬಗ್ಗೆ ಹಲವು ಬಾರಿ ಅಧಿಕೃತರ ಗಮನ ಸೆಳೆಯುವ ನಿಟ್ಟಿನಲ್ಲಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮ ಜರುಗದಂತಿಲ್ಲ.
ಒಡೆದ ತಡೆಗೋಡೆಯನ್ನು ಸರಿಪಡಿಸಿ ಕೃಷಿ ಸ್ಥಳಗಳಿಗೆ ನೀರು ನುಗ್ಗದಂತೆ ಯೋಜನೆ ರೂಪಿಸಬೇಕೆಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಕೆ.ಆರ್.ಜಯಾನಂದ ಅವರು ಜಿಲ್ಲಾಧಿಕಾರಿಯವರಿಗೆ, ಕಿರು ನೀರಾವರಿ ಇಂಜಿನಿಯರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
Click this button or press Ctrl+G to toggle between Kannada and English