ಕುಂಬಳೆ: ಕೇರಳ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ನಗರದ ನಗರಸಭಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮ ಸಾವಿರಾರು ಕಾರ್ಯಕರ್ತರ ಸಂಭ್ರಮದೊಂದಿಗೆ ಮುಗಿಲು ಮುಟ್ಟಿತು.
ಬೆಳಿಗ್ಗೆ 8.30ರ ವೇಳೆಗೆ ಕ್ರೀಡಾಂಗಣದತ್ತ ಆಗಮಿಸ ತೊಡಗಿದ ವಿವಿಧೆಡೆಗಳ ಕಾರ್ಯಕರ್ತರ ತಂಡ ಮೋದಿಯವರಿಗೆ ಘೋಷಣೆ ಕೂಗುತ್ತಿರುವುದು ಕಂಡುಬಂತು.9.30ರ ವೇಳೆಗೆ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. ಸುಮಾರು 55 ಸಾವಿರಕ್ಕಿಂತಲೂ ಅಧಿಕ ಮಂದಿ ಮೋದಿಯವರ ಪ್ರಚಾರ ಭೇಟಿಗೆ ಸಾಕ್ಷಿಯಾದರು.ಕಾಸರಗೋಡು ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರ,ಕಣ್ಣೂರು ಜಿಲ್ಲೆ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿ,ಎನ್ಡಿಎ ಅಭಿಮಾನಿಗಳು ನೆರೆದಿದ್ದರು.
ಬಿಸಿಲ ಝಳಕ್ಕೆ ಕುಗ್ಗದ ಕಾರ್ಯಕರ್ತರು:
ವರ್ಷಕ್ಕಿಂತ ಅಧಿಕ ತಾಪಮಾನ ಏರಿಕೆಯಿಂದ ಬೆಂದು ಬಸವಳಿದಿರುವ ಕರಾವಳಿಯ ಜನತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಪಾಲ್ಗೊಳ್ಳುವುದರಲ್ಲಿ ಕಡಿತಗೊಂಡಿರುವ ಮಧ್ಯೆ ಮೋದಿಯವರ ಚುನಾವಣಾ ಪ್ರಚಾರ ಸಭೆಗೆ ಮಹಿಳೆಯರು,ವೃದ್ದರು ಹಾಗೂ ಮಕ್ಕಳ ಸಹಿತ ಸಾವಿರಾರು ಕಾರ್ಯಕರ್ತರು ಆಗಮಿಸಿರುವುದು ಕೇರಳದಲ್ಲೂ ಮೋದಿ ಪರವಾದ ಅಲೆಗೆ ಸಾಕ್ಷಿಯೆಂದು ಹೇಳಲ್ಪಡುತ್ತಿದೆ.ಗಡಿ ಪ್ರದೇಶಗಳಾದ ಬಾಯಾರು,ಪೆರ್ಲ,ಮಂಜೇಶ್ವರ,ದೇಲಂಪಾಡಿ,ಪಾಣತ್ತೂರು ಮೊದಲಾದೆಡೆಗಳಿಂದ ಖಾಸಗೀ ಬಸ್ ಗಳನ್ನು ಬಾಡಿಗೆಗೆ ಗೊತ್ತುಪಡಿಸಿ ಕಾರ್ಯಕರ್ತರು ಆಗಮಿಸಿದ್ದರು.
ಮಜ್ಜಿಗೆ ಯತೇಚ್ಚ:
ಉರಿಬಿಸಿಲಿನಿಂದ ಕಂಗೆಟ್ಟ ಕಾರ್ಯಕರ್ತ ಅಭಿಮಾನಿಗಳ ಹೊಟ್ಟೆ ತಣಿಸಲು ಕರ್ನಾಟಕದ ಕೆಎಂಎಫ್ನ ನಂದಿನಿ ಮಜ್ಜಿಗೆಯ 200 ಎಂ.ಎಲ್ ನ ಪ್ಯಾಕೆಟ್ ಹಾಗೂ 100 ಎಂ.ಎಲ್ನ ಶುದ್ದ ಕುಡಿಯುವ ನೀರನ್ನು ಉಚಿತವಾಗಿ ಸಭೆಯಲ್ಲಿ ಹಂಚಿರುವುದು ಶ್ಲಾಘನೆಗೆ ಕಾರಣವಾಯಿತು.
ಗಮನ ಸೆಳೆದ ಮೋದಿ ಮುಖವಾಡ:
ಪ್ರಧಾನಿ ಮೋದಿಗಳ ಕಟ್ಟಾ ಅಭಿಮಾನವನ್ನು ತೋರ್ಪಡಿಸಲು ಹಲವು ಕಾರ್ಯಕರ್ತರು,ಮಕ್ಕಳು ಮೋದಿಯ ಮುಖವಾಡ ಧರಿಸಿ ಗಮನ ಸೆಳೆದರು.