ಕುಂಬಳೆ: ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆಯ ದಿನವಾದ ಗುರುವಾರ ಜಿಲ್ಲೆಯಾದ್ಯಂತ ಹಲವೆಡೆ ವ್ಯಾಪಕ ಹಿಂಸಾಚಾರಗಳು ನಡೆದು ಜನ ಸಾಮಾನ್ಯರು ಅಕ್ಷರಶಃ ಕಂಗೆಟ್ಟು ಸಂಕಷ್ಟ ಅನುಭವಿಸಿದ ಸ್ಥಿತಿ ನಿರ್ಮಾಣವಾಯಿತು.
ಮಂಜೇಶ್ವರ,ಕಾಸರಗೋಡು ಮತ್ತು ಉದುಮ ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ನಡೆದ ಕಾಸರಗೋಡು ಸರಕಾರಿ ಕಾಲೇಜಿನ ಆವರಣದಲ್ಲಿ ಗುರುವಾರ ಬೆಳಿಗ್ಗೆಯೇ ಜಮಾಯಿಸಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು ತೀವ್ರ ಕುತೂಹಲಿಗಳಾಗಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾತರಿಸುತ್ತಿದ್ದು ಕಂಡುಬಂತು.ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಲ್ಲಿ ಜಮಾಯಿಸಿದ್ದ ಕಾರ್ಯಕರ್ತರ ಮುಗಿಲುಮುಟ್ಟಿದ ಜಯಘೋಷಗಳ ಕಾರಣ ಕಾಸರಗೋಡು ಚೆರ್ಕಳ ಹೆದ್ದಾರಿಯ ಸಂಚಾರ ಗಂಟೆಗಳಷ್ಟು ಕಾಲ ಸ್ತಂಭಗೊಂಡಿತು.
ಕುಂಬಳೆಯಲ್ಲಿ ಹಿಂಸಾಚಾರ:
ಸಂಜೆ ನಾಲ್ಕು ಗಂಟೆಯ ವೇಳೆಗೆ ಯುಡಿಎಫ್ ಕಾರ್ಯಕರ್ತರ ಜಯಘೋಷ ಕುಂಬಳೆ ಪೇಟೆ ಪ್ರವೇಶಿಸುತ್ತಿರುವಂತೆ ಎಡಪಕ್ಷಗಳನ್ನು ಹೀನಾಯವಾಗಿ ಬಯ್ದು ಜಯಘೋಷ ಹಾಕಿದ ಕಾರಣ ಎಡಪಕ್ಷಗಳ ನೂರಾರು ಕಾರ್ಯಕರ್ತರು ಒಮ್ಮಿಂದೊಮ್ಮೆಗೆ ಯುಡಿಎಫ್ ಕಾರ್ಯಕರ್ತರ ಮೇಲೆ ಮುಗಿಬಿದ್ದು ಘರ್ಷಣೆ ಸೃಷ್ಟಿಯಾಯಿತು.ವ್ಯಾಪಕಗೊಂ ಡಕಲ್ಲು ತೂರಾಟದ ಕಾರಣ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಸಾಕ್ ರ ಬೆಂಗಾಲು ವಾಹನ ನುಚ್ಚು ನೂರಾಯಿತು.
ಗಲಭೆ,ಕಲ್ಲು ತೂರಾಟ ನಿಯಂತ್ರಿಸಲು ಪೋಲೀಸರು ಅಶ್ರುವಾಯು ಪ್ರಯೋಗಿಸಿ ಗಲಭೆಕೋರರನ್ನು ಚದುರಿಸಿದರು.
ಸಂಚಾರ ಅಸ್ತವ್ಯಸ್ಥ:
ಮತ ಎಣಿಕೆಯ ಮುಗಿಲು ಮುಟ್ಟಿದ ವಿಜಯೋತ್ಸವ ಹಾಗೂ ಘರ್ಷಣೆಗಳ ಕಾರಣ ಸಂಚಾರ ರಸ್ತೆ ತಡೆಗಳುಂಟಾಗಿ ವಾಹನ ಸಂಚಾರ ಮೊಟಕುಗೊಂಡಿತು.ದಕ್ಷಿಣ ಕನ್ನಡ ಬಂದ್ ಆದ ಕಾರಣ ಬೆಳಿಗ್ಗಿನಿಂದಲೇ ಮಂದ ಗಿತಿಯಲ್ಲಿ ಹೆದ್ದಾರಿ ಸಂಚಾರ 12 ರ ವೇಳೆಗೆ ಸಂಪೂರ್ಣ ಸ್ತಂಭಗೊಂಡಿತು.ಕುಂಬಳೆಯಲ್ಲಾದ ಘರ್ಷಣೆಯ ಕಾರಣ ಕುಂಬಳೆ- ಬದಿಯಡ- ಮುಳ್ಳೇರಿಯಾ,ಕುಂಬಳೆ-ಪುತ್ತಿಗೆ-ಪೆರ್ಲ ಬಸ್ ಗಳು ಸಂಚಾರ ಸ್ಥಗಿತಗೊಳಿಸಿದವು.ಕುಂಬಳೆ ಪೇಟೆಯಲ್ಲಿ ಅಂಗಡಿಮುಗ್ಗಟ್ಟುಗಳು ಸಂಪೂರ್ಣ ಮುಚ್ಚಿದ್ದವು.