ಮಂಗಳೂರು: ಭಯೋತ್ಪಾದಕ ಕೃತ್ಯ ಮತ್ತು ಸಮಾಜಘಾತಕ ಕೃತ್ಯಗಳಲ್ಲಿ ತೊಡಗಿರುವ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆ.ಎಫ್.ಡಿ) ಸಂಘಟನೆಯನ್ನು ರಾಜ್ಯ ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಅಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ನಗರದ ಬೆಸೆಂಟ್ ವೃತ್ತದ ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ. ಹರ್ಷ ಮಾತನಾಡಿ ಹುಣಸೂರಿನ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ 5. ಕೋಟಿ ಹಣ ನೀಡಬೇಕೆಂದು ತಂದೆ-ತಾಯಿಗಳಿಗೆ ಬೆದರಿಕೆ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದನ್ನು ಅಭಾವಿಪ ತೀವ್ರವಾಗಿ ಖಂಡಿಸುತ್ತದೆ ಅಲ್ಲದೇ ಕೆ.ಎಫ್.ಡಿ ಸಂಘಟನೆಯ ಬಾಹ್ಯವಾಗಿ ಬೆಂಬಲವಾಗಿರುವ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಮತ್ತು ಕೆ.ಎಫ್.ಡಿ. ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಇವುಗಳ ಉದ್ದೇಶಗಳು ಕೂಡ ಒಂದೇ, ಸರ್ಕಾರ ಕೂಡಲೇ ಇಂತಹ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ ಸಮಾಜಘಾತುಕ ಸಂಘಟನೆಗಳನ್ನು ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಪಾರಸ್ಸು ಮಾಡಿ ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಎರಡು ಸಂಘಟನೆಯ ಪದಾಧಿಕಾರಿಗಳನ್ನು ಕೂಡಲೇ ಬಂಧಿಸಿ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿದರು.
ಈ ಹೇಡಿ ಸಂಘಟನೆಗಳ ಹಿಂದೆ ಇನ್ನು ಅನೇಕ ವಿವಿಧ ಹೆಸರಿನಲ್ಲಿ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದು ಈ ಸಂಘಟನೆಗಳ ದುರುದ್ದೇಶವನ್ನು ಪತ್ತೆಹಚ್ಚಿ, ಇದರ ಹಿಂದಿರುವ ದೊಡ್ಡ ದುಷ್ಕೃತ್ಯವೆಸಗುವ ಜಾಲವನ್ನೂ ಸರ್ಕಾರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹೇಡಿ ಸಂಘಟನೆಯ ಕಾರ್ಯಕರ್ತರು ಈ ರೀತಿ ದುಷ್ಕೃತ್ಯ ನಡೆಸಿದಾಗ ಪ್ರಗತಿಪರರು ಅಲ್ಲದೇ ಸದಾಕಾಲ ಬೊಬ್ಬೆ ಹೊಡೆಯುವ ಬುದ್ದಿಜೀವಿಗಳು, ಮಾನವ ಹಕ್ಕುಗಳ ಆಯೋಗ ಈಗೇಕೆ ತಮ್ಮ ಬಾಯಿಗೆ ಬೀಗ ಜಡಿದುಕೊಂಡು ಮೌನವಹಿಸುತ್ತಿದ್ದಾರೆ ? ಅಲ್ಲದೇ ಇಂತಹ ಸಂಘಟನೆಗಳ ಬೆಂಬಲಕ್ಕೆ ನಿಂತಿರುವ ಪ್ರಗತಿಪರರು ಮತ್ತು ಬುದ್ಧಿಜೀವಿಗಳ ಬೌದ್ಧಿಕ ಪ್ರೋತ್ಸಾಹ, ಪ್ರೇರಣೆಯ ಭಾಷಣ, ಬರವಣಿಗೆಗಳಲ್ಲಿ ಬೆಂಗಾವಲಾಗಿ ಕೆಲಸ ಮಾಡಿಕೊಂಡಿದ್ದಾರೆ ಇವರನ್ನೂ ಕೂಡ ತನಿಖೆಗೊಳಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಅಲ್ಲದೇ ದೇಶ ಮತ್ತು ರಾಜ್ಯದ ಬೆಂಗಳೂರು, ಮಂಗಳೂರು, ಪುತ್ತೂರು, ಶಿವಮೊಗ್ಗ, ಮೈಸೂರು, ಹಾಸನ, ಭಟ್ಕಳ ಸೇರಿದಂತೆ ಇನ್ನು ಅನೇಕ ಕಾಲೇಜು ಕ್ಯಾಂಪಸ್ಗಳಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಿ ಅಮಾಯಕ ಯುವಕ-ಯುವತಿಯರನ್ನು ಇಂತಹ ದುಷ್ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮತ್ತು ಯುವತಿಯರನ್ನು ಪ್ರೀತಿಯ ಮುಖವಾಡ ಧರಿಸಿ ಯುವತಿಯರನ್ನು ಅಪಹರಿಸುವ ಕೃತ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ ಇವರ ಬೆಂಬಲಕ್ಕೆ ಹಲವಾರು ಕಾಲೇಜು ಮತ್ತು ವಿವಿ ಕ್ಯಾಂಪಸ್ಗಳಲ್ಲಿ ಅನೇಕ ಉಪನ್ಯಾಸಕರು ಕೂಡ ಬೆಂಬಲಕ್ಕಿದ್ದಾರೆ ಅವರನ್ನೂ ಕೂಡ ಪೋಲಿಸರು ಪತ್ತೆಹಚ್ಚಿ ತನಿಖೆಗೊಳಪಡಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಹುಣಸೂರಿನ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಬರ್ಬರವಾಗಿ ಹತ್ಯೆಗೈದ ಈ ಆರೋಪಿಗಳಿಗೆ ಕೂಡಲೇ ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಈ ಪ್ರಕರಣದಲ್ಲಿ ಇನ್ನೂ ಬಾಗಿಯಾದವರನ್ನು ಪತ್ತೆಹಚ್ಚಿ ಅವರ ಮೇಲೆ ಕೂಡ ಕಠಿಣ ಕ್ರಮ ಜರುಗಿಸಬೇಕೆಂದು ಸರ್ಕಾರವನ್ನು ಒತ್ತಾುಸಿದರು.
ಪ್ರತಿಭಟನೆಯ ನೇತೃತ್ವವನ್ನು ನಗರ ಸಂಘಟನಾ ಕಾರ್ಯದರ್ಶಿ ವಿನಯ್ ವಿ. ಜಾಧವ್, ತಾಲೂಕು ಸಂಚಾಲಕ್ ಸುಜೀತ್, ಜಗದೀಶ್, ಮಿಥೇಶ್ ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Click this button or press Ctrl+G to toggle between Kannada and English