[1]ಮಂಗಳೂರು: ಮಂಗಳೂರು ನಗರ ಪ್ರಧಾನ ಅಂಚೆ ಕಚೇರಿಯಲ್ಲಿ ದ.ಕ.ಜಿಲ್ಲಾ ವ್ಯಾಪ್ತಿಯ ಆಧಾರ್ ವಿಶಿಷ್ಟ ಗುರುತಿನ ಚೀಟಿಗಾಗಿ ನೋಂದಣಿ ಪ್ರಕ್ರಿಯೆಗೆ ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಬುಧವಾರ ಚಾಲನೆ ನೀಡಿದರು.ಅವರು ಲಯನ್ಸ್ ಜಿಲ್ಲಾ ಗವರ್ನರ್ ಜಿ.ಕೆ.ರಾವ್ರಿಗೆ ಮೊದಲ ಆಧಾರ್ ನೋಂದಣಿ ಅರ್ಜಿ ನೀಡುವ ಮೂಲಕ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶರ್ಮಾ ನೋಂದಣಿ ಅರ್ಜಿ ತುಂಬಲು ಅನಕ್ಷರಸ್ಥರು ಹಾಗೂ ಹಳ್ಳಿಯ ಜನರು ಏಜೆಂಟರ ಮೊರೆ ಹೋಗುವುದನ್ನು ತಪ್ಪಿಸಬೇಕು, ಅದಕ್ಕಾಗಿ ಅನುಭವಿ ಏಜೆನ್ಸಿಯ ಮೂಲಕ ಫೋಟೊ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಅದಕ್ಕಾಗಿ ಸೂಕ್ತ ವವಸ್ಥೆ ಜಾರಿಗೊಳಿಸಬೇಕು ಎಂದರು.ಆಧಾರ್ ಗುರುತಿನ ಚೀಟಿ ಹೊಂದಲು ಆಸಕ್ತಿ ಇರುವವರು ನಿಗದಿತ ಅರ್ಜಿಯನ್ನು ತುಂಬಿ ನಿಯೋಜಿತ ಅಂಚೆ ಕಚೇರಿಯ ಸಿಬ್ಬಂದಿಗೆ ಗುರುತಿನ ದಾಖಲೆ ದೃಢೀಕರಿಸಿದ ವಿಳಾಸದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು,ದೇಶದಾದ್ಯಂತದ ಎಲ್ಲಾ ಅಂಚೆ ಕಚೇರಿಗಳಲ್ಲಿ ಆಧಾರ್ ಚೀಟಿಗಾಗಿ ನೋಂದಣಿ ಪ್ರಕ್ರಿಯೆ ನಡೆಯಲಿದ್ದು,ಅರ್ಜಿದಾರರ ಯುಐ ಡಾಟಾ ನೋಂದಾಯಿಸಲು ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಉಪಯೋಗಿಸಲಾಗುತ್ತದೆ. ಅರ್ಜಿದಾರರ ಹತ್ತು ಬೆರಳುಗಳ ಅಚ್ಚುಗಳ ಗುರುತುಗಳನ್ನು ಮತ್ತು ಅಕ್ಷಿಪಟಲದ ಗುರುತುಗಳನ್ನು ತೆಗೆಯಲಾಗುತ್ತದೆ. ಈ ಕಾರ್ಯಕ್ಕೆ 15ರಿಂದ 18 ನಿಮಿಷಗಳು ತಗಲುತ್ತದೆ. ಆದುದರಿಂದ ದಿನಕ್ಕೆ 30ರಿಂದ 35 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ,ಅದರ ಬಳಿಕ 45 ದಿನಗಳಲ್ಲಿ ಆಧಾರ್ ಗುರುತಿನ ಚೀಟಿ ಅರ್ಜಿದಾರರ ಕೈಗೆ ಸೇರುತ್ತದೆ.ಅರ್ಜಿದಾರರಿಗೆ ನೀಡುವ ಟೋಕನ್ನಲ್ಲಿ ಅವರು ಹಾಜರಾಗಬೇಕಾದ ಸಮಯವಿರುತ್ತದೆ ಎಂದು ಶರ್ಮಾ ಹೇಳಿದರು.
ಆಧಾರ್ ಗುರುತಿನ ಚೀಟಿ ಒದಗಿಸುವ ಈ ಪ್ರಕ್ರಿಯೆ ಇನ್ನೂ ಮೂರು ವರ್ಷಗಳ ಕಾಲ ಚಾಲನೆ ಯಲ್ಲಿರುವುದರಿಂದ ಆಕಾಂಕ್ಷಿಗಳು ತಾಳ್ಮೆಯಿಂದ ಅವಕಾಶ ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಅಂತಿಮ ದಿನ ಎಂಬುದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಈ ವಿಶಿಷ್ಟ ಗುರುತಿನ ಚೀಟಿ ಪಡೆದು ಕೊಳ್ಳುವುದು ಕಡ್ಡಾಯವಲ್ಲ ಎಂದರು.
ಮಂಗಳೂರು ಪ್ರಧಾನ ಅಂಚೆ ಕಚೇರಿಯ ಪ್ರಧಾನ ಅಧೀಕ್ಷಕ ಬಿ.ಜಿ.ನಾಯಕ ಮಾತನಾಡಿ,ಕರ್ನಾಟಕದಲ್ಲಿ ರಾಜ್ಯದಲ್ಲಿ ಜೂನ್24ರಿಂದ ನೋಂದಣಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ, ಮಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ ನೋಂದಣಿ ಆರಂಭವಾಗಿದೆ. ಆಧಾರ್ ಗುರುತಿನ ಚೀಟಿ ವಿತರಣೆಯ ಕಾರ್ಯ ನಾಗರಿಕರು ನಮ್ಮೊಂದಿಗೆ ಸಹಕರಿಸುವುದು ಅತ್ಯಗತ್ಯ ಇದರಲ್ಲಿ ತಪ್ಪು ಮಾಹಿತಿ ಹಾಗೂ ತಪ್ಪು ಭಾವಚಿತ್ರಗಳು ನುಸುಳದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಜನರನ್ನು ಅಂಚೆ ಕಚೇರಿಯತ್ತ ಸೆಳೆಯಲು ಆಧಾರ್ನ್ನು ಆಧಾರವಾಗಿ ಬಳಸಲಾಗುವುದು ಇನ್ನೊಂದೆರಡು ದಿನಗಳಲ್ಲಿ ಕುಲಶೇಖರ, ಕಂಕನಾಡಿ, ಕೊಡಿಯಾಲ್ ಬೈಲ್, ಬಿಜೈ, ಬಲ್ಮಠ, ಹಂಪನಕಟ್ಟೆ ಹಾಗೂ ಉಳ್ಳಾಲ ಅಂಚೆ ಕಚೇರಿಗಳಲ್ಲಿ ಆರಂಭಿಸಲಾಗುವುದು. ನೋಂದಣಿಗೆ ಅವಶ್ಯಕವಾದ ಕಿಟ್ನ ಲಭ್ಯತೆಯನ್ನಾಧರಿಸಿ ದ.ಕ. ಜಿಲ್ಲಾದ್ಯಾಂತದ ಕಚೇರಿಗಳಲ್ಲಿ ಹಂತಹಂತ ವಾಗಿ ನೋಂದಣಿ ಕಾರ್ಯ ಆರಂಭಗೊಳ್ಳಲಿದೆ,ಸ್ಟೇಟ್ ಬ್ಯಾಕ್ ಆಫ್ ಮೈಸೂರು ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಒಪ್ಪಂದ ವಾಡಿ ಕೊಳ್ಳಲಾಗಿದ್ದು ಸದ್ಯದಲ್ಲಿಯೇ ಈ ಬ್ಯಾಂಕ್ಗಳಲ್ಲಿಯೂ ನೋಂದಣಿ ಕಾರ್ಯ ಆರಂಭವಾಗಲಿದೆ ಎಂದರು.
ವಿಲ್ಸನ್ ಸ್ವಾಗತಿ ಮ್ಯಾಕ್ಸಿ ಪಿಂಟೊ ವಂದಿಸಿದರು.