[1]ಮಂಗಳೂರು: ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಮೃತದೇಹ ನಿನ್ನೆ ಪತ್ತೆಯಾಗಿದೆ. ಗುರುಪುರದ ಕೊಳಂಬೆ ನಿವಾಸಿ ಯೋಗಿಣಿ ಎಂಬಾಕೆ ಆತ್ಮಹತ್ಯೆಗೆ ಶರಣಾದ ಯುವತಿ.
ಯೋಗಿಣಿ ಬೈಕಂಪಾಡಿಯಲ್ಲಿರುವ ಪ್ಲಾಸ್ಟಿಕ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಳು. ಜುಲೈ ಮೂರರಂದು ಕೆಲಸಕ್ಕೆಂದು ಮನೆಬಿಟ್ಟವಳು ಅಂದು ಮಧ್ಯಾಹ್ನವೇ ರಜೆ ಕೇಳಿ ಬಂದಿದ್ದಳು. ಅಲ್ಲಿಂದ ಆಕೆ ಗುರುಪುರದ ಫಲ್ಗುಣಿ ನದಿ ಬಳಿ ತಲುಪಿದ್ದು, ತನ್ನ ಬ್ಯಾಗ್ ಹಾಗೂ ಮೊಬೈಲ್ನ್ನು ತಟದಲ್ಲಿಯೇ ಬಿಟ್ಟು ಅಲ್ಲಿಂದಲೇ ನದಿಗೆ ಹಾರಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳೀದ್ದರು. ವಿಷಯ ಮನೆಯವರಿಗೆ ತಿಳಿದು ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ನಿನ್ನೆ ಸಂಜೆ ಆಕೆಯ ಮೃತದೇಹ ಪತ್ತೆಯಾಗಿದೆ.
ಮನೆಯವರನ್ನು ಹಾಗೂ ಆಕೆಯ ಉದ್ಯೋಗ ಮಾಡುವ ಜಾಗದಲ್ಲಿ ಬಜ್ಪೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇತ್ತೀಚೆಗೆ ಮನೆಯವರು ಯೋಗಿಣಿಗೆ ವರಾನ್ವೇಷಣೆ ಮಾಡುತ್ತಿದ್ದರು. ಅದರಲ್ಲಿ ಎರಡು ಪ್ರಸ್ತಾವಗಳು ಕೈಬಿಟ್ಟಿದ್ದವು.
ಉಳಿದಂತೆ ಯಾವುದೇ ವಿಚಾರ ತಮಗೆ ಗೊತ್ತಿಲ್ಲವೆಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ಮೊಬೈಲ್ನಲ್ಲೂ ಯಾವುದೇ ಸಂದೇಶ ರವಾನೆಯಾದ ಸುಳಿವಿಲ್ಲದಿದ್ದರೂ ಸಾವಿಗೂ ಮುನ್ನ ಕೆಲವರಿಗೆ ಕರೆ ಮಾಡಿದ್ದಳು. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.