[1]ಮಂಗಳೂರು: ಮಂಗಳೂರಿನಲ್ಲಿ ಗಾಂಜಾ ಸಾಗಣೆಯ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, 10.50 ಲಕ್ಷ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ಈ ಕುರಿತು ಮಾಹಿತಿ ನೀಡಿದರು. ಗಾಂಜಾ ಸಾಗಣೆ ಮಾಡುತ್ತಿದ್ದ ಕಾಸರಗೋಡಿನ ಉಪ್ಪಳದ ನಿವಾಸಿ ಮೊಯಿದ್ದೀನ್ ನವಾಜ್ (29) ಬಂಧಿಸಲಾಗಿದ್ದು, ಆತನಿಂದ 10.50 ಲಕ್ಷ ಮೌಲ್ಯದ ಸುಮಾರು 51 ಕೆಜಿ ಗಾಂಜಾ ಮತ್ತು ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಆಂಧ್ರ ಪ್ರದೇಶದ ವಿಶಾಖ ಪಟ್ಟಣದಿಂದ ಮಂಗಳೂರು, ಕಾಸರಗೋಡಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿಶಾಖಪಟ್ಟಣದಿಂದ ಮಂಗಳೂರು ನಗರ, ಕಾಸರಗೋಡಿಗೆ ಪೂರೈಸಲು ಗಾಂಜಾವನ್ನು ಸಾಗಿಸುತ್ತಿದ್ದ.
ಮೊಯಿದ್ದೀನ್ ನವಾಜ್ ಮೊದಲು ದುಬೈಯಲ್ಲಿ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಕೆಲಸ ಕಳೆದುಕೊಂಡ ಮೇಲೆ ಒಂದು ವರ್ಷದಿಂದ ಊರಿಗೆ ವಾಪಸ್ ಆಗಿದ್ದ. ಹಲವು ದಿನಗಳಿಂದ ಗಾಂಜಾ ವ್ಯವಹಾರದಲ್ಲಿ ತೊಡಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಕೊಣಾಜೆ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.