[1]ಮಂಗಳೂರು: ನಗರದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನರೇಶ್ ಶೆಣೈ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ಮಂಗಳವಾರ ನರೇಶ್ ಶೆಣೈ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧಿಶರು ತಿರಸ್ಕರಿಸಿದ್ದಾರೆ. ಕೊಲೆ ನಡೆದ ಕೆಲ ತಿಂಗಳುಗಳಾದ ಬಳಿಕ ಪೊಲೀಸರಿಗೆ ಶರಣಾದ ನರೇಶ್, ತಲೆಮರೆಸಿಕೊಂಡಿದ್ದ ವೇಳೆ ಜಿಲ್ಲಾ ಮತ್ತು ಹೈಕೋರ್ಟ್ನಲ್ಲಿ ಜಾಮೀನು ಪಡೆಯಲು ಪ್ರಯತ್ನಿಸಿದ್ದರೂ ದೊರೆತಿರಲಿಲ್ಲ.
ಬಂಧಿತ 7 ಮಂದಿ ಪೈಕಿ ಮಂಜು ನಿರೇಶ್ವಾಲ್ಯ ಹಾಗೂ ಶೈಲೇಶ್ಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿತ್ತು. ಈ ಪೈಕಿ ಶೈಲೇಶ್ಗೆ ಜಾಮೀನು ನೀಡಿರುವ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ತನಿಖಾಧಿಕಾರಿಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೇ ಬಂಧಿತ ಶಿವ ಹಾಗೂ ಶ್ರೀಕಾಂತ್ ಕೂಡ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.