[1]ಮಂಗಳೂರು: ನಗರದ ಖಾಸಗಿ ಬಸ್ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದು, ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜೆಪ್ಪಿನಮೊಗರು ನಿವಾಸಿ ನಾರಾಯಣ ಆಳ್ವ (60) ಎಂಬುವರು ಇಂದು ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದಾರೆ. ಮನೆ ಮಂದಿ ಆಳ್ವರಿಗಾಗಿ ಹುಡುಕಿ ಬಳಿಕ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ನಂತರ ನೇತ್ರಾವತಿ ಸೇತುವೆ ಬಳಿ ಆಗಮಿಸಿದ ಪೊಲೀಸರು ಹುಡುಕಾಟ ಆರಂಭಿಸಿದ್ದು, ಆಳ್ವರ ಕಾರು ಉಳ್ಳಾಲ ಸೇತುವೆಯಲ್ಲಿ ಪತ್ತೆಯಾಗಿದೆ. ಕಾರನ್ನು ಠಾಣೆಯಲ್ಲಿರಿಸಿದ್ದಾರೆ. ಮನೆ ಮಂದಿ ಆತಂಕಗೊಂಡಿದ್ದು, ತನಿಖೆ ಮುಂದುವರೆದಿದೆ. ಆಳ್ವರು ಗಣೇಶ್ ಪ್ರಸಾದ್ ಹೆಸರಿನ ಖಾಸಗಿ ಬಸ್ನ್ನು ನಡೆಸುತ್ತಿದ್ದರು.