[1]ಉಪ್ಪಳ: ಮಂಗಳೂರಿನಿಂದ ಕಾಸರಗೋಡಿಗೆ ಬಸ್ನಲ್ಲಿ ಸಾಗಿಸುತ್ತಿದ್ದ 5.200 ಕಿಲೋ ಗಾಂಜಾ ಸಹಿತ ಓರ್ವನನ್ನು ವಾಮಂಜೂರು ಚೆಕ್ಪೋಸ್ಟ್ ನಲ್ಲಿ ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಚೆಕ್ಪೋಸ್ಟ್ ನಲ್ಲಿ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿದೆ.
ಮಂಗಳವಾರ ಸಂಜೆ 4 ಗಂಟೆಗೆ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನ್ನು ತಪಾಸಣೆ ನಡೆಸುತ್ತಿದ್ದಾಗ ಚೌಕಿ ಆಜಾದ್ ನಗರ ನಿವಾಸಿ ಮೊಹಮ್ಮದ್ರ ಪುತ್ರ ಅಹಮ್ಮದ್(45) ಎಂಬಾತನಿಂದ ಗಾಂಜಾ ವಶಪಡಿಸಲಾಗಿದ್ದು ಈತನನ್ನು ಸೆರೆಹಿಡಿದಿದ್ದಾರೆ. ಈ ಮಾಲನ್ನು ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ತಲುಪುವ ಕಲ್ಲಿಕೋಟೆ ನಿವಾಸಿಗೆ ಹಸ್ತಾಂತರಿಸಲು ಕೊಂಡೊ ಯ್ಯುತ್ತಿರುವುದಾಗಿ ತಿಳಿಸಿದ್ದಾನೆ.
ವಾಮಂಜೂರು ಚೆಕ್ಪೋಸ್ಟ್ನ ಅಬಕಾರಿ ಅಧಿಕಾರಿಗಳಾದ ಎನ್. ಶಂಕರನ್, ರೆನ್ನಿ ಫೆರ್ನಾಂಡೀಸ್, ಉಮ್ಮರ್ ಕುಟ್ಟಿ,ಮಂಜುನಾಥ ಆಳ್ವ,ಸುಧೀಶ್,ಸಜಿತ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆಗೆ ಸಹಕರಿಸಿತು.