ಕುಂದಾಪುರ: ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಅನ್ನುವಳ್ಳಿ ಸೇತುವೆ ಬಳಿ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ತೀರ್ಥಹಳ್ಳಿಯಿಂದ ಕುಂದಾಪುರದತ್ತ ಸಾಗುತ್ತಿದ್ದ ಬಸ್ಸು ಮೇಗರವಳ್ಳಿ ಹತ್ತಿರ ಬರುತ್ತಿದ್ದಾಗ ಆಗುಂಬೆಯಿಂದ ತೀರ್ಥಹಳ್ಳಿಯತ್ತ ಸಾಗುತ್ತಿದ್ದ ಕಾರು ಬಸ್ಸಿನ ಹಿಂಬದಿಯ ಚಕ್ರಕ್ಕೆ ಬಲವಾಗಿ ಢಿಕ್ಕಿಹೊಡೆದ ಪರಿಣಾಮ ಬಸ್ಸಿನ ಹೌಸಿಂಗ್ ಪೂರ್ಣ ತುಂಡಾಗಿದ್ದರಿಂದ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿತ್ತು. ಪಲ್ಟಿಯಾದ ರಭಸಕ್ಕೆ ಬಸ್ಸು ನಜ್ಜುಗುಜ್ಜಾಗಿತ್ತು.
ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಕುಂದಾಪುರದ ಬಳಿಯ ಬಸ್ರೂರಿನ ಸಯ್ಯದ್ಮಹಜಾಲಿನ್ ಹಾಗೂ ಇತರ ಮೂವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿ ಸುಮಾರು 19 ಮಂದಿ ಪ್ರಯಾಣಿಕರು ಪಯಣಿಸುತ್ತಿದ್ದು ಅವರಲ್ಲಿ ಹದಿನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಅವರುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಬಸ್ಸಿನ ಚಾಲಕ ವಾಸುಕಿ ಪ್ರಸಾದ್, ನಾಗರಾಜ್, ಗಿರಿಜಮ್ಮ, ಪ್ರಭಾವತಿ, ಸುಧಾಕರ, ಗೌರಿ, ಚಂದ್ರಮತಿ, ಕಲಾವತಿ, ಖತಿಜಾಬಿ, ವಾಸಿಂ, ಉಮೇಶ್ ಹಾಗೂ ಟೀಕಪ್ಪ ಗಾಯಗೊಂಡವರು. ಸ್ಥಳಕ್ಕೆ ಆಗುಂಬೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English