ಮಂಗಳೂರು: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎನ್ನಲಾದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿ, 37.50 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿನ ಈರೋಡ್ ನಿವಾಸಿ ಸಂಜೀವಕುಮಾರ್ ಆರ್.(45) ಮತ್ತು ಮಡಿಕೇರಿ ನಿವಾಸಿ ಬಿ.ಸಿ.ತಿಮ್ಮಯ್ಯ(34) ಬಂಧಿತ ಆರೋಪಿಗಳು. ಇವರು ತಮಿಳುನಾಡು ಮೂಲದ 16 ವಿದ್ಯಾರ್ಥಿಗಳಿಂದ 2.82 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂಬ ಆರೋಪವಿದೆ.
ದೇರಳಕಟ್ಟೆಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಆರೋಪಿಗಳು ವಂಚಿಸಿದ್ದರು ಎನ್ನಲಾಗಿದೆ. ಕಾಲೇಜಿನಿಂದ ಸೀಟಿನ ಕುರಿತು ಯಾವುದೇ ಮಾಹಿತಿ ಬಾರದ್ದರಿಂದ ಸಂಶಯಗೊಂಡ ಕೆಲ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿನಲ್ಲಿ ವಿಚಾರಿಸಿದಾಗ ವಂಚಿಸಿರುವುದು ಬೆಳಕಿಗೆ ಬಂದಿದೆ.
ಬಳಿಕ ವಂಚನೆಗೊಳಗಾದವರು ಹೆಚ್ಚುವರಿ ಹಣ ನೀಡುವ ಆಸೆವೊಡ್ಡಿ ಉಪಾಯದಿಂದ ಆರೋಪಿಗಳನ್ನು ಕರೆಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಯಿಸಿ ಆರೋಪಿಗಳನ್ನು ಒಪ್ಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳಿಂದ 37.50 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English