[1]ಹೊಸದಿಲ್ಲಿ : ದೇಶವನ್ನು ವಿಭಜಿಸುವ ಆರ್ಎಸ್ಎಸ್ ಮತ್ತು ಆ ಬಗೆಯ ಇತರ ಸಂಘಟನೆಗಳ ಸಿದ್ಧಾಂತಕ್ಕೆ ನನ್ನ ವಿರೋಧವಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಆರ್ಎಸ್ಎಸ್ ವಿರುದ್ಧದ ತನ್ನ ಹೇಳಿಕೆಗಾಗಿ ದಾಖಲಿಸಲ್ಪಟ್ಟಿರುವ ಮಾನನಷ್ಟ ದಾವೆಯ ಸಂಬಂಧ ಇಂದು ಅಸ್ಸಾಂ ಕೋರ್ಟಿನಲ್ಲಿ ಹಾಜರಾದ ಬಳಿಕ ರಾಹುಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
“ನಾನು ಬಡವರು, ರೈತರು ಮತ್ತು ನಿರುದ್ಯೋಗಿಗಳ ಪರವಾಗಿ ಹೋರಾಡುತ್ತಿರುವುದರಿಂದ ನನ್ನ ವಿರುದ್ಧ ಈ ಬಗೆಯ ಕೇಸುಗಳನ್ನು ಹೂಡಲಾಗುತ್ತಿದೆ; ಆದರೆ ನಾನು ಈ ರೀತಿಯ ಕೇಸುಗಳಿಂದ ಹೆದರುವವನಲ್ಲ; ನನ್ನ ಹೋರಾಟವನ್ನು ನಾನು ಮುಂದುವರಿಸುವೆ’ ಎಂದು ರಾಹುಲ್ ಗುಡುಗಿದರು.
ಕಳೆದ ವರ್ಷ ರಾಹುಲ್ ಗಾಂಧಿ ಅವರು ತಮ್ಮ ರೋಡ್ ಶೋಗೆ ಮುನ್ನ ಇಲ್ಲಿನ 16ನೇ ಶತಮಾನದ ವೈಷ್ಣವ ದೇವಾಲಯ ಭಾರ್ಪೇಟಾ ಸತ್ರಾಗೆ ಭೇಟಿ ನೀಡುವವರಿದ್ದರು. ಆದರೆ ಆರ್ಎಸ್ಎಸ್ ಕಾರ್ಯಕರ್ತರು ತನ್ನನ್ನು ದೇಗುಲ ಪ್ರವೇಶಿಸಿದಂತೆ ತಡೆದರು ಎಂದು ರಾಹುಲ್ ಮಾಧ್ಯಮದ ಮುಂದೆ ದೂರಿದ್ದರು. ತಾನು ಸತ್ರಾ ಪ್ರವೇಶಿಸದಂತೆ ಸ್ಥಳೀಯ ಮಹಿಳೆಯರನ್ನು ಆರ್ಎಸ್ಎಸ್ ತನ್ನ ವಿರುದ್ಧ ಎತ್ತಿ ಕಟ್ಟಿತ್ತು ಎಂದು ರಾಹುಲ್ ಆಪಾದಿಸಿದ್ದರು.
ರಾಹುಲ್ ಅವರ ಈ ಆಪಾದನೆಗಳನ್ನು ಆರ್ಎಸ್ಎಸ್ ತಿರಸ್ಕರಿಸಿತ್ತಲ್ಲದೆ ಹೊಸದಿಲ್ಲಿಯಲ್ಲಿ ರಾಹುಲ್ ಆರ್ಎಸ್ಎಸ್ ಪ್ರತಿಷ್ಠೆಗೆ ಮಸಿ ಬಳಿದಿದ್ದಾರೆ ಎಂದು ಆರೋಪಿಸಿ ಆ ಬಗ್ಗೆ ರಾಹುಲ್ ವಿರುದ್ಧ ಮಾನನಷ್ಟ ದಾವೆಯನ್ನು ಹೂಡಿತ್ತು. ಅಂತೆಯೇ ಕಾಮರೂಪ್ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟರ ನ್ಯಾಯಾಲಯವು ರಾಹುಲ್ ಗಾಂಧಿಗೆ ಸೆ.29ರಂದು (ಇಂದು) ಕೋರ್ಟಿಗೆ ಹಾಜರಾಗುವಂತೆ ಸೂಚಿಸಿತ್ತು.