[1]ಮಂಗಳೂರು/ಉಡುಪಿ/ಕಾಸರಗೋಡು/ಮಡಿಕೇರಿ: ಭಾರತದ ಸೇನಾ ಕಾರ್ಯಾಚರಣೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಮಧ್ಯಾಹ್ನದ ವೇಳೆಗೆ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ವಿವಿಧೆಡೆ ಪಟಾಕಿ ಸಿಡಿಸಲಾಯಿತು. ಅದು ರಾತ್ರಿವರೆಗೂ ಮುಂದುವರಿಯಿತು. ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿತಾದ ಸುದ್ದಿ, ಯೋಧರಿಗೆ ಅಭಿನಂದನೆಗಳ ಮಹಾಪೂರವೇ ಹರಿದಾಡಿತು. ಜೈಹಿಂದ್ ಘೋಷಣೆ, ಹೇಳಿಕೆಗಳು ಎಲ್ಲೆಲ್ಲೂ ಕೇಳಿಸಿತು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರಗಾಮಿಗಳನ್ನು ಸದೆ ಬಡಿದ ಭಾರತೀಯ ಸೇನೆಯ ಯೋಧರನ್ನು ಬಿಜೆಪಿ ಮಂಗಳೂರು ದಕ್ಷಿಣದ ಅಧ್ಯಕ್ಷ ವೇದವ್ಯಾಸ್ ಕಾಮತ್ ಅವರು ಶ್ಲಾ ಸಿದ್ದಾರೆ.
ಕ್ಯಾ| ಕಾರ್ಣಿಕ್ ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ಪಾಕಿಸ್ಥಾನಿ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡಿ ಪಾಕಿಸ್ಥಾನಕ್ಕೆ ದಿಟ್ಟ ಉತ್ತರ ನೀಡಿರುವ ಭಾರತೀಯ ಸೇನೆಯ ಕ್ರಮ ಶ್ಲಾಘನೀಯ ಎಂದು ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಉರಿ ಸೇನಾ ನೆಲೆಯ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ರಾಜತಾಂತ್ರಿಕ ನಿರ್ಣಯಗಳೊಂದಿಗೆ ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳಿಗೆ ನುಗ್ಗಿ ಭಯೋತ್ಪಾದಕರನ್ನು ಸದೆ ಬಡಿದಿರುವ ಭಾರತೀಯ ಸೇನೆಯ ಕ್ರಮ ಅಭಿನಂದನೀಯ. ಯೋಜನಾಬದ್ಧ ಮತ್ತು ವ್ಯವಸ್ಥಿತ ಕಾರ್ಯದ ಮೂಲಕ ದಿಟ್ಟ ನಿರ್ಣಯ ಕೈಗೊಂಡ ಸೇನೆಯ ಅಧಿಕಾರಿಗಳು ಮತ್ತು ಪ್ರಧಾನಿ ಮೋದಿ ಕ್ರಮ ಶ್ಲಾಘನೀಯ ಎಂದಿದ್ದಾರೆ.
[2]ಭಾರತೀಯ ಸೇನೆಯು ಪಾಕ್ ಭಯೋತ್ಪಾದಕ ನೀತಿಗೆ ಸೂಕ್ತ ಎದಿರೇಟು ನೀಡಿದೆ. ಈ ಮೂಲಕ ವಿನಾಕಾರಣ ಮಾತನಾಡುವವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಸೂಕ್ತ ಉತ್ತರ ನೀಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಆಗಾಗ ಅಕ್ರಮವಾಗಿ ದೇಶದೊಳಗೆ ನುಗ್ಗಿ ಸೈನಿಕರ ಹತ್ಯೆ ಮಾಡುತ್ತಿದ್ದ ಪಾಕ್ ಉಗ್ರರಿಗೆ ಇದು ಸರಿಯಾದ ಉತ್ತರ ಎಂದರು.
ಉಡುಪಿ: ಭಾರತೀಯ ಸೈನಿಕರ ಹತ್ಯೆಗೆ ಸೇನೆ ಪ್ರತೀಕಾರ ಮೂಲಕ ಸೂಕ್ತ ಉತ್ತರ ನೀಡಿದೆ. ದಿಟ್ಟ ನಿಲುವು ಪ್ರದರ್ಶಿಸಿದ ಪ್ರಧಾನಿ ಮೋದಿಯವರನ್ನು ಇಡೀ ದೇಶವೇ ಅಭಿನಂದಿಸುತ್ತದೆ ಎಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ. ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ತೆಕ್ಕಟ್ಟೆ: ಭಾರತದ ಸೇನೆಯ ಕಾರ್ಯಾಚರಣೆಯನ್ನು ಶ್ಲಾಘಿಸಿ ತೆಕ್ಕಟ್ಟೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತೆಕ್ಕಟ್ಟೆ ವಿಹಿಂಪ ಅಧ್ಯಕ್ಷ ರಜತ್ ತೆಕ್ಕಟ್ಟೆ. ಬಜರಂಗ ದಳದ ಸಂಚಾಲಕ ಶ್ರೀನಾಥ್ ಶೆಟ್ಟಿ ಮೇಲ್ತಾರುಮನೆ, ರಾಮಚಂದ್ರ ಆಚಾರ್ಯ, ಧ್ರುವ ಪುರಾಣಿಕ್, ಹರೀಶ್ ಕುಲಾಲ್, ಸಂತೋಷ್ ತೋಟದಬೆಟ್ಟು, ಸುರೇಶ್ ಶಾನಾಡಿ ಮೊದಲಾದವರು ಉಪಸ್ಥಿತರಿದ್ದರು.
ಭಾರತದ ಸೇನಾಪಡೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಕಾರ್ಯಾಚರಣೆಗೆ ಕರಾವಳಿಯಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಯ ವಿವಿಧೆಡೆ ಬಿಜೆಪಿ, ವಿಹಿಂಪ, ಬಜರಂಗ ದಳ ಸಹಿತ ಸಾರ್ವಜನಿಕರು ಪಟಾಕಿ ಸಿಡಿಸಿ ಹರ್ಷಾಚರಣೆ ನಡೆಸಿದರು.