ಮಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದೇ ಬೇಡ. ವಿಧಾನಸಭೆ ಹಾಗೂ ವಿಧಾನಪರಿಷತ್ ಮಾಡಿದ ನಿರ್ಣಯವನ್ನೇ ರಾಜ್ಯ ಸರ್ಕಾರ ಅನುಸರಿಸಲಿ. ಕೋರ್ಟ್ ನಿಂದನೆ ಮಾಡಿದ ಕಾರಣಕ್ಕೆ ನನ್ನನ್ನು ಜೈಲಿಗಟ್ಟಿದರೂ ತೊಂದರೆಯಿಲ್ಲ ಎಂದು ಕೇಂದ್ರದ ಮಾಜಿ ಸಚಿವರಾದ ಬಿ. ಜನಾರ್ದನ ಪೂಜಾರಿ ಖಡಕ್ ಆಗಿ ಹೇಳಿದ್ದಾರೆ.
ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಪ್ರೀಂ ತಮಿಳುನಾಡಿಗೆ ದಿನಕ್ಕೆ 6 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿ ಅನ್ಯಾಯದ ಮೇಲೆ ಅನ್ಯಾಯ ಮಾಡುತ್ತಿದೆ. ಕರ್ನಾಟಕ ಈಗಾಗಲೇ ತಮಿಳುನಾಡು ಮಾತ್ರವಲ್ಲ ಕೇರಳ, ಪಾಂಡಿಚೇರಿಗೂ ನೀರುಣಿಸುತ್ತಿದೆ. ನಾಡಿನ ಜನರಿಗೆ ನೀರಿಲ್ಲದಿರುವಾಗ ಇನ್ನು ತಮಿಳುನಾಡಿಗೆ ಹೇಗೆ ನೀರು ಕೊಡುವುದು? ಹೀಗಿದ್ದರೂ ಸುಪ್ರೀಂ ಕೋರ್ಟ್ ಯಾಕೆ ಗೊಂದಲ ಸೃಷ್ಟಿಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.
ಈಗಾಗಲೇ ರಾಜ್ಯದಲ್ಲಿ ಮುಂಗಾರು ಮುಕ್ತಾಯವಾಗಿದೆ. ಯಾರೇ ತಪ್ಪು ಮಾಡಿದರೂ ನ್ಯಾಯಾಂಗ ತಪ್ಪು ಮಾಡಬಾರದು. ನಾವ್ಯಾರೂ ಸುಪ್ರೀಂ ವಿರೋಧಿಗಳಲ್ಲ. ಆದರೆ, ಎಲ್ಲಾ ರಾಜ್ಯಗಳ ಹಿತ ಕಾಪಾಡುವುದು ಕೋರ್ಟ್ ಜವಾಬ್ದಾರಿ. ಇಲ್ಲೇ ನೀರಿಗೆ ಹಾಹಾಕಾರ ಇರೋವಾಗ ಇನ್ನೊಂದು ರಾಜ್ಯಕ್ಕೆ ನೀರು ಬಿಡಬೇಕೆಂದು ಆದೇಶಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಜ್ಯದ ಜನತೆಯ ಹಿತ ಕಾಪಾಡುವುದು ಸರ್ಕಾರದ ಕೆಲಸ. ಹಾಗಾಗಿ ಶಾಸಕಾಂಗ ನಿರ್ಣಯಿಸಿದಂತೆ ಮುಖ್ಯಮಂತ್ರಿ ನಡೆದುಕೊಳ್ಳಲಿ ಎಂದು ಸಲಹೆ ಮಾಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತವಾದ ಮಾಹಿತಿ ಎಲ್ಲಿಂದಲೂ ಬಂದಿಲ್ಲ. ಅಲ್ಲಿನ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಏನಾಗಿದೆ ಎಂದು ಬಾಯಿಬಿಡಲಿ ಎಂದರು.
Click this button or press Ctrl+G to toggle between Kannada and English