[1]ಮಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಇದೇ ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಂದಿದೆ. ಪುನೀತ್ ಅವರ `ದೊಡ್ಮನೆ ಹುಡ್ಗ’ ನಂತರ ಇವರಿಗೆ ಇದು ಹೊಸ ಅನುಭವವಂತೆ.
ನಾಗೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಡಂದಲೆ ಸುರೇಶ್ ಎಸ್. ಭಂಡಾರಿ ನಿರ್ಮಾಣದ ಅಂಬರ್ ಕೇಟರರ್ಸ್ ತುಳು ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಭಾರತಿಯವರು ಭಾಗಿಯಾಗುತ್ತಿದ್ದಾರೆ. ಅಂಬರ್ ಕೇಟರರ್ಸ್ ಇದೊಂದು ವಿನೂತನ ಶೈಲಿಯ ಸಿನಿಮಾ ಇದಾಗಿದ್ದು, ಹಾಸ್ಯ ಪ್ರಧಾನ ಕಥಾವಸ್ತು ಹೊಂದಿದೆ. ಕೇಟರರ್ಸ್ ಉದ್ಯಮ ವ್ಯವಸ್ಥೆಯೊಳಗಿನ ಅನುಭವ ಹಂಚುವ ರಸದೌತಣ ನೀಡಲು ಈ ‘ಅಂಬರ್ ಕೇಟರರ್ಸ್’ ಸಿನಿಮಾ ರೆಡಿಯಾಗುತ್ತಿದೆ.
ನಾಗೇಶ್ವರ ಸಿನಿ ಕಂಬೈನ್ಸ್ ಪ್ರಸ್ತುತಿಯಲ್ಲಿ ಜೈಪ್ರಸಾದ್ ಬಜಾಲ್ ಚಿತ್ರಕತೆ ರಚಿಸಿ ನಿರ್ದೇಶಿಸುತ್ತಿದ್ದಾರೆ. ಇನ್ನು ಕಡಂದಲೆ ಸುರೇಶ್ ಮತ್ತು ಎಸ್.ಭಂಡಾರಿ ಅವರು ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಮಣಿಕಾಂತ್ ಕದ್ರಿ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಅ. 16ರಂದು ಬೆಳಿಗ್ಗೆ 8.30 ಗಂಟೆಗೆ ಉಡುಪಿ ಬಾಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ‘ಅಂಬರ್ ಕೇಟರರ್ಸ್’ ತುಳು ಸಿನಿಮಾಕ್ಕೆ ಕನ್ನಡ ಚಲನಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್ ಚಾಲನೆ ನೀಡಲಿದ್ದಾರೆ. ಹೆಸರಾಂತ ನಿರ್ದೇಕರರಾದ ಹೆಚ್.ವಾಸು, ಆನಂದ್ ಪಿ.ರಾಜು ಮತ್ತು ಹ.ಸೂ. ರಾಜಶೇಖರ್ ಸೇರಿದಂತೆ ಮೊದಲಾದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.