- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ನೇಮಕ

Vasanth Bangera [1]ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ನೇಮಕವಾಗಿದ್ದಾರೆ.

ಐದು ಬಾರಿ ಗೆದ್ದ ವಸಂತ ಬಂಗೇರ ಅವರು ಈ ಬಾರಿ ಗೆದ್ದರೆ ಮಂತ್ರಿಯಾಗುವರು ಎಂಬ ನಂಬಿಕೆ ಜನರದ್ದಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಸಂದರ್ಭ ಬಂಗೇರರಿಗೆ ಕೈ ಕೊಟ್ಟಿದ್ದರು. ಮೊದಲ ಅವಧಿಯ ನಿಗಮಗಳ ಪಟ್ಟಿಯಲ್ಲೂ ಬಂಗೇರ ಅವರ ಹೆಸರು ಇರಲಿಲ್ಲ. ಈ ಬಾರಿ ಎರಡನೇ ಅವಧಿಯ ನಿಗಮಗಳ ಪಟ್ಟಿಯಲ್ಲಿ ಬಂಗೇರರಿಗೆ ಸಣ್ಣ ಕೈಗಾರಿಕಾ ನಿಗಮ ದೊರೆತಿದೆ.

ಕುವೆಟ್ಟು ಪಂಚಾಯತ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿ ರಾಜಕೀಯ ಜೀವನ ಪ್ರವೇಶಿಸಿದ ವಸಂತ ಬಂಗೇರ ಅವರು ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಅನಂತರದ ಚುನಾವಣೆಯಲ್ಲೂ ಅವರು ಬಿಜೆಪಿಯಿಂದ ಆಯ್ಕೆಯಾಗಿ ರಾಜ್ಯದಲ್ಲೇ ಇಬ್ಬರು ಬಿಜೆಪಿ ಶಾಸಕರ ಪೈಕಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇವರ ಜತೆ ಇನ್ನೊಬ್ಬ ಬಿಜೆಪಿಯಿಂದ ಆಯ್ಕೆಯಾಗಿದ್ದವರು ಬಿ.ಎಸ್‌. ಯಡಿಯೂರಪ್ಪ. ಆದರೆ ಬಿಜೆಪಿಯಿಂದ ಹೊರಬಂದ ಬಂಗೇರರು ಜನತಾದಳತ್ತ ಮುಖ ಮಾಡಿದರು. ಅಲ್ಲಿಯೂ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆಯ ಮುಖ್ಯ ಸಚೇತಕರೂ ಆದರು. ಆದರೆ ಎರಡು ಬಾರಿ ಸೋಲನುಭವಿಸಿ ಕಾಂಗ್ರೆಸ್‌ ಕೈಹಿಡಿದರು.

ಸ್ವ ಪಕ್ಷೀಯರ ವಿರೋಧದ ನಡುವೆಯೂ ಬಂಗೇರರ ಪಾಲಿಗೆ ಅದೃಷ್ಟಲಕ್ಷ್ಮೀ ಒಲಿಯಿತು. ಎರಡನೇ ಬಾರಿಯೂ ಕಾಂಗ್ರೆಸ್‌ನಲ್ಲಿ ವಿಜೇತರಾಗುವ ಮೂಲಕ ಐದು ಬಾರಿ ಗೆದ್ದ ಶಾಸಕರೆಂಬ ಖ್ಯಾತಿ ಪಡೆದರು.

ಕೇದೆ ಸುಬ್ಬ ಪೂಜಾರಿ – ದೇವಕಿ ದಂಪತಿಯ ಮಗನಾದ ವಸಂತ ಬಂಗೇರ ಅವರದು ಹುಟ್ಟು ಹೋರಾಟ ಸ್ವಭಾವ. ಅವರ ಸಹೋದರ ಚಿದಾನಂದ ಬಂಗೇರ, ಮತ್ತೂಬ್ಬ ಸಹೋದರ ಕೆ. ಪ್ರಭಾಕರ ಬಂಗೇರ ಕೂಡ ಶಾಸಕರಾಗಿದ್ದರು. ಒಂದೇ ಮನೆಯ ಮೂರು ಮಂದಿ ಶಾಸಕರಾಗಿ ಮೆರೆದದ್ದು ಬೆಳ್ತಂಗಡಿಯ ಇತಿಹಾಸದಲ್ಲಿ ಮೊದಲು. ಮೂರೂ ಪಕ್ಷದಲ್ಲಿ ಗೆದ್ದು ದಾಖಲೆ ಮಾಡಿದ ಶಾಸಕ ಕೂಡ ವಸಂತ ಬಂಗೇರರು ಮಾತ್ರ.

1983, 1985 ಮತ್ತು 1994, 2008, 2013ರಲ್ಲಿ ಶಾಸಕರಾಗಿದ್ದ ಇವರು ತಮ್ಮ ಅವಧಿಯಲ್ಲಿ ಅತ್ಯಂತ ಹೆಚ್ಚು ಹಕ್ಕುಪತ್ರಗಳನ್ನು ನೀಡಿದವರೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಮಂಗನ ಕಾಯಿಲೆ ವಿರುದ್ಧ ಹೋರಾಟ ಮಾಡಿದ್ದಷ್ಟೇ ಅಲ್ಲ ಮಂಗನ ಕಾಯಿಲೆಗೆ ಕಾರಣವಾಗುವ ಕ್ರಿಮಿಯನ್ನು ವಿಧಾನಸೌಧದ ಒಳಗೆ ಕೊಂಡೊಯ್ದು ಅಧಿವೇಶನದಲ್ಲಿ ಮುಚ್ಚಳ ತೆಗೆಯುವ ಬೆದರಿಕೆ ಹಾಕುವ ಮೂಲಕ ಸರಕಾರ ಅದಕ್ಕೊಂದು ಮದ್ದು ಮಾಡಲು ಕಾರಣರಾದರು.

ಭ್ರಷ್ಟಾಚಾರ ಮತ್ತು ಸೋಮಾರಿ ಅಧಿಕಾರಿಗಳಿಗೆ ದುಃಸ್ವಪ್ನವಾಗಿದ್ದ ಬಂಗೇರರು ಯಾವತ್ತೂ ಬಡವರ ಪರ ಎಂಬ ಮಾತಿದೆ. ಮೊತ್ತಮೊದಲ ಬಾರಿಗೆ ಕತ್ತಲಕೂಪದಲ್ಲಿದ್ದ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ ಕೀರ್ತಿ. ಗುರುವಾಯನಕೆರೆ ವರೆಗೆ ಮಾತ್ರ ಬರುತ್ತಿದ್ದ ಉಡುಪಿ, ಉಪ್ಪಿನಂಗಡಿ ಖಾಸಗಿ ಬಸ್ಸುಗಳನ್ನು ಬೆಳ್ತಂಗಡಿ ವರೆಗೆ ಬರುವಂತೆ ಮಾಡುವಲ್ಲಿ ಬಂಗೇರರ ಪಾತ್ರ ಮಹತ್ತರ. ಅನೇಕ ಕಡೆ ನದಿಗಳಿಗೆ ಸೇತುವೆ ರಚಿಸುವ ಮೂಲಕ ಹಳ್ಳಿಗಳ ನಡುವಿನ ಸಂಪರ್ಕಕೊಂಡಿಯಾಗಲು ಕಾರಣ.

ತಾಲೂಕಿನಲ್ಲಿ ತೀವ್ರ ವಿದ್ಯುತ್‌ ಬರ ಉಂಟಾದಾಗ ಕೇಮಾರಿನಿಂದ ವಿದ್ಯುತ್‌ ಸರಬರಾಜು ಮಾಡಿಸಿ ಗುರುವಾಯನಕೆರೆ, ಧರ್ಮಸ್ಥಳಕ್ಕೆ ವಿದ್ಯುತ್‌ ಉಪಕೇಂದ್ರಗಳನ್ನು ಮಂಜೂರಾತಿ ಮಾಡಿಸಿದ್ದು ಬಂಗೇರ ಅವರ ಸಾಧನೆ.