[1]ಮಂಗಳೂರು: ಬ್ಯಾಂಕ್ನಲ್ಲಿ 500 ರೂ., 1,000 ರೂ. ನೋಟು ವಿನಿಮಯ ಸಂದರ್ಭ ಎದುರಾಗುವ ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಪ್ರತಿಷ್ಠಿತ ಬ್ಯಾಂಕೊಂದರ ದೇರೇಬೈಲು ಶಾಖೆ ಮ್ಯಾನೇಜರ್ ತೋರಿಸಿರುವ ಸ್ಪಂದನೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ.
ಬ್ಯಾಂಕ್ಗೆ ಹಿರಿಯ ನಾಗರಿಕರೋರ್ವರು ಹಳೆ ನೋಟು ವಿನಿಮಯಕ್ಕೆ ಬಂದಿದ್ದರು. ಚಿಲ್ಲರೆ ಸಮಸ್ಯೆಯಿಂದ 2,000 ರೂ. ಹೊಸ ನೋಟು ನೀಡುವುದು ಅನಿವಾರ್ಯವಾಯಿತು. ಇದನ್ನು ಚಿಲ್ಲರೆ ಮಾಡಲು ಸಮಸ್ಯೆಯಾಗುತ್ತಿದ್ದೆ ಎಂದು ಮ್ಯಾನೇಜರ್ ಅವರಲ್ಲಿ ತೋಡಿಕೊಂಡಾಗ ತನ್ನಲ್ಲಿದ್ದ ವೈಯಕ್ತಿಕ ಚಿಲ್ಲರೆ ಹಣವನ್ನು ಅವರಿಗೆ ನೀಡಿದರು.
ಇದೇ ರೀತಿ ಸಮಸ್ಯೆ ಇತರರಿಗೆ ಎದುರಾದ ಸಂದರ್ಭ ಸ್ಪಂದಿಸಲು ಏನಾದರೂ ಪರಿಹಾರ ಏಕೆ ಕಂಡುಕೊಳ್ಳಬಾರದು ಎಂಬುದಾಗಿ ಚಿಂತನೆ ನಡೆಸಿದ ಅವರು, ಪ್ರದೇಶದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ತೆರಳಿ ವಸ್ತುಸ್ಥಿತಿ ವಿವರಿಸಿ ಅವರಿಗೆ ಅವಶ್ಯವಿರುವಷ್ಟು ಚಿಲ್ಲರೆ ಇರಿಸಿಕೊಂಡು ಉಳಿದ ಚಿಲ್ಲರೆ ಹಣವನ್ನು 2,000 ರೂ. ನೋಟಿಗೆ ವಿನಿಮಯ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿದ ಬಹುತೇಕ ಮಂದಿ ತಮಗೆ ಬೇಕಾಗುವಷ್ಟು ಚಿಲ್ಲರೆ ಇರಿಸಿ ಉಳಿದ ಹಣ ಬ್ಯಾಂಕ್ಗೆ ನೀಡಿದರು. ಮ್ಯಾನೇಜರ್ ಈ ಚಿಲ್ಲರೆಯನ್ನು ತೀರಾ ಅವಶ್ಯವಿರುವರಿಗೆ ನೀಡುವ ಮೂಲಕ ಚಿಲ್ಲರೆ ಸಮಸ್ಯೆ ಪರಿಹರಿಸಿದರು.