- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭೀಕರ ಗುಂಡಿನ ಕಾಳಗದಲ್ಲಿ ಓರ್ವ ಸೇನಾ ಜವಾನ ಹುತಾತ್ಮ: ಇಬ್ಬರು ಉಗ್ರರು ಬಲಿ

Bandipora [1]ಹೊಸದಿಲ್ಲಿ : ಉತ್ತರ ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ನಡೆದಿರುವ ಭೀಕರ ಗುಂಡಿನ ಕಾಳಗದಲ್ಲಿ ಓರ್ವ ಸೇನಾ ಜವಾನ ಹುತಾತ್ಮನಾಗಿ ಇಬ್ಬರು ಉಗ್ರರು ಹತರಾಗಿದ್ದಾರೆ.

ಇದೇ ವೇಳೆ ಭದ್ರತಾ ಪಡೆಗಳು ಬಂಡಿಪೋರಾ ಸಮೀಪ ಮನೆಯೊಂದರಲ್ಲಿ ಅಡಗಿಕೊಂಡಿರುವ ಉಗ್ರರ ಇನ್ನಂದು ಗುಂಪಿನ ವಿರುದ್ಧ ಗುಂಡಿನ ಕಾಳಗದಲ್ಲಿ ನಿರತವಾಗಿವೆ.

ಬಂಡಿಪೋರಾ ಜಿಲ್ಲೆಯ ನಯೀದ್‌ಖಾ ಎಂಬಲ್ಲಿನ ತೋಪೊಂದರಲ್ಲಿ ಉಗ್ರರು ಅಡಗಿಕುಳಿತಿರುವ ಮಾಹಿತಿ ಪಡೆದ ಭದ್ರತಾ ಪಡೆಗಳು ತೋಪನ್ನು ಸುತ್ತುವರಿದು ಗುಂಡಿನ ಕಾಳಗಕ್ಕೆ ತೊಡಗಿಕೊಂಡರು. ಉಗ್ರರೊಂದಿಗೆ ಕಾದಾಟದಲ್ಲಿ 13ನೇ ರಾಷ್ಟ್ರೀಯ ರೈಫ‌ಲ್ಸ್‌ ಪಡೆಯ ಸೈನಿಕನೊಬ್ಬ ಹುತಾತ್ಮನಾದ. ಇದೇ ವೇಳೆ ಇಬ್ಬರು ಉಗ್ರರು ಸೇನೆಯ ಗುಂಡಿಗೆ ಬಲಿಯಾದರು.

ಹತ ಉಗ್ರರ ಬಳಿ ಇದ್ದ ಎರಡು ಶಸ್ತ್ರಾಸ್ತ್ರಗಳು, ಗ್ರೆನೇಡ್‌ ಲಾಂಚರ್‌ಗಳು ಮತ್ತು ಸಮರದಲ್ಲಿ ಬಳಸುವ ಸ್ಫೋಟಕಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡರು. ಹತ ಉಗ್ರನ ಗುರುತನ್ನು ಇನ್ನಷ್ಟೇ ಗೊತ್ತುಪಡಿಸಿಕೊಳ್ಳಬೇಕಿದೆ ಎಂದು ಶ್ರೀನಗರದಲ್ಲಿನ ಸೇನಾ ವಕ್ತಾರ ಹೇಳಿದ್ದಾರೆ.

ಬಂಡಿಪೋರಾದಲ್ಲಿ ಕಳೆದ ಎರಡು ದಿನಗಳಲ್ಲಿ ಉಗ್ರರ ವಿರುದ್ಧ ನಡೆದಿರುವ ಎರಡನೇ ಎನ್‌ಕೌಂಟರ್‌ ಇದಾಗಿದೆ. ನ.22ರ ಮೊದಲ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದರು. ಅವರ ಬಳಿ ಇದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹಾಗೂ 2,000 ರೂ.ಮೌಲ್ಯದ ಎರಡು ನೋಟುಗಳನ್ನು ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿದ್ದವು.

ಇದೇ ವೇಳೆ ಸೋಪೋರ್‌ ಜಿಲ್ಲೆಯ ತುಜ್ಜಾರ್‌ ಷರೀಫ್ನಲ್ಲಿ ಸೇನೆ ಮತ್ತು ಪೊಲೀಸ್‌ ಜಂಟಿ ಕಾರ್ಯಾಚರಣೆ ನಡೆಸುತ್ತಿರುವುದು ವರದಿಯಾಗಿದೆ. ಇಲ್ಲಿನ ಹಳೇ ಮನೆಯೊಂದರಲ್ಲಿ ಒಬ್ಬ ಅಥವಾ ಇಬ್ಬರು ಉಗ್ರರು ಅಡಗಿಕೊಂಡಿರುವ ಮಾಹಿತಿ ಸೇನೆಗೆ ಇದೆ.