[1]ಮಂಗಳೂರು: ಕೇಂದ್ರ ಸರ್ಕಾರ 500 ಹಾಗೂ ಒಂದು ಸಾವಿರ ರೂ. ಮುಖ ಬೆಲೆಯ ನೋಟು ಚಲಾವಣೆಯನ್ನು ರದ್ದುಪಡಿಸಿದ ಬಳಿಕ ಬ್ಯಾಂಕ್ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಬ್ಯಾಂಕ್ ಸಿಬಂದಿ ಮೇಲೆ ಒತ್ತಡ ಹೆಚ್ಚಿದೆ. ಅವರ ಸೇವೆಯನ್ನು ಗುರುತಿಸಿ ಮಂಗಳೂರಿನ ಶಿವಗೌರಿ ಟ್ರಸ್ಟ್ನ ಟ್ರಸ್ಟಿ ಎ. ಬದರಿನಾಥ ಕಾಮತ್ ಬ್ಯಾಂಕ್ಗಳಿಗೆ ತೆರಳಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಗುಲಾಬಿ ಹೂ ಹಾಗೂ ಸಿಹಿ ತಿಂಡಿ ನೀಡಿ ಅಭಿನಂದಿಸಿದರು.
ಕೇಂದ್ರ ಸರ್ಕಾರವು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ ಬಳಿಕ ಬ್ಯಾಂಕ್ಗಳಿಗೆ ಬರುವ ಗ್ರಾಹಕರ ಸಂಖ್ಯೆ ಹಲವು ಪಟ್ಟು ಅಧಿಕಗೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಟ್ಟಿರುವ ದಿಟ್ಟ ಹೆಜ್ಜೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಹಳೆಯ ನೋಟುಗಳ ಬದಲಾವಣೆ, ಬ್ಯಾಂಕ್ಗೆ ಠೇವಣಿ, ಎಟಿಎಂ ಕಾರ್ಡ್ಗಳಿಗೆ ಅರ್ಜಿ, ಹೊಸ ಖಾತೆ ತೆರೆಯುವ ಮುಂತಾದ ಬ್ಯಾಂಕಿಂಗ್ ಪ್ರಕ್ರಿಯೆ ಹೆಚ್ಚಾಗಿದೆ. ಇದರಿಂದಾಗಿ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಒತ್ತಡದಿಂದ ಕೆಲಸ ಮಾಡುವವರನ್ನು ಗುರುತಿಸಿ ಅವರಿಗೆ ನೈತಿಕ ಸ್ಥೈರ್ಯ ನೀಡುವ ಕೆಲಸವನ್ನು ಸಮಾಜ ಮಾಡಿದರೆ ಅವರಿಗೆ ಇನ್ನಷ್ಟು ಸೇವೆ ಸಲ್ಲಿಸಲು ಪ್ರೇರೇಪಣೆಯಾಗುತ್ತದೆ ಎಂದು ಬದರಿನಾಥ್ ಕಾಮತ್ ಹೇಳಿದರು.
ಈ ವೇಳೆ ಹಾಂಗ್ಯೋ ಐಸ್ಕ್ರೀಂನ ಆಡಳಿತ ನಿರ್ದೇಶಕ ಪ್ರದೀಪ್ ಜಿ. ಪೈ, ಕಾರ್ಪೋರೇಟರ್ ರಾಜೇಂದ್ರ, ಬಿಜೆಪಿ ಕಾರ್ಯದರ್ಶಿ ಭಾಸ್ಕರ ಚಂದ್ರ, ಬಿಜೆಪಿ ಮುಖಂಡ ವಿಠಲ ಕುಡ್ವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.