ಸುಬ್ರಹ್ಮಣ್ಯ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಸುಳ್ಯ ತಾಲೂಕಿನ ದೇವರಗುಂಡ ವೆಂಕಪ್ಪ ಸದಾನಂದ ಅವರನ್ನು ಸೂಚಿಸಿರುವ ಬೆನ್ನಿಗೆ ಡಿ.ವಿ. ಸದಾನಂದ ಗೌಡ ಬೆಂಬಲಿಗರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉರುಳುಸೇವೆ ಸಲ್ಲಿಸಿದರು.
ಡಿ.ವಿ.ಹೆಸರು ಮುಂಚೂಣಿಯಲ್ಲಿರುವುದರಿಂದ ಸಂತಸಗೊಂಡಿರುವ ಸುಬ್ರಹ್ಮಣ್ಯದ ನಾಗರಿಕರು ಪಕ್ಷಬೇಧ ಮರೆತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ, ದೇವಳದ ಹೊರಾಂಗಣದಲ್ಲಿ ಮಧ್ಯಾಹ್ನದ ವೇಳೆ ಉರುಳುಸೇವೆ ನಡೆಸಿದರು. ಸುಬ್ರಹ್ಮಣ್ಯದ ನಾಗರಿಕರು, ವಾಹನ ಮಾಲಕರು-ಚಾಲಕರು ಸೇರಿ ಕಾಶಿಕಟ್ಟೆಯಿಂದ ದೇವಳದ ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ದರ್ಪಣತೀರ್ಥ ನದಿಯಲ್ಲಿ ಮಿಂದು ಕ್ಷೇತ್ರದ ವಿಶೇಷ ಹರಕೆಯಾದ ಸಂಪೂರ್ಣ ಶರಣಾಗತಿಯ ಉರುಳುಸೇವೆ ಮಾಡಿದರು.
ಸುಬ್ರಹ್ಮಣ್ಯ ಬಿಜೆಪಿ ಅಧ್ಯಕ್ಷ ಅಚ್ಯುತ ಗೌಡ, ಗ್ರಾ.ಪಂ. ಸದಸ್ಯ ಅಶೋಕ್ ಆಚಾರ್, ಉದ್ಯಮಿಗಳಾದ ದಿನೇಶ್ ಬಿ.ಎನ್., ಸತೀಶ್ ಭಟ್, ಮೋನಪ್ಪ ಮಾನಾಡು, ಸುಬ್ರಹ್ಮಣ್ಯ ಕೆ.ಎಲ್., ಯಶೋದಕೃಷ್ಣ ರಾಜೇಶ್ ಎನ್.ಎಸ್., ಪ್ರಶಾಂತ್ ಆಚಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.