[1]ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ನಡೆಸಲಾದ ಮದ್ದೂರು, ಬಾದಾಮಿ, ಶ್ರೀರಂಗಪಟ್ಟಣ, ಕುಂದಾಪುರ, ತುರುವೆಕೆರೆ, ಕಾರ್ಕಳದ 400 ಮಂದಿ ಪಾನಮುಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದರು.
ನಿನ್ನೆ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಅವರು, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಧರ್ಮಸ್ಥಳದ ಮಹೋತ್ಸವದಲ್ಲಿ ಪಾನಮುಕ್ತತೆಯ ಸಂಭ್ರಮೋತ್ಸವ ಆಚರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಡಾ. ಹೆಗ್ಗಡೆ, ವ್ಯಸನ ಬಿಟ್ಟು ಪವಿತ್ರರಾಗಿ ಬಂದಿರುವ ನಿಮ್ಮನ್ನು ಸ್ವಾಮಿ ಹರಸಿದ್ದಾರೆ. ಕುಡಿತವೆಂಬ ಮಡಿ ಮೈಲಿಗೆಯಿಂದ ಹೊರಬಂದ ನಿಮ್ಮ ವ್ಯಕ್ತಿತ್ವ ಎಲ್ಲರೂ ಮೆಚ್ಚುವಂತದ್ದಾಗಿದೆ. ವ್ಯಸನ ಬಿಡುವುದೆಂದರೆ ಬದುಕು ಸ್ವೀಕರಿಸುವುದು ಎಂದರ್ಥ.
ಆನೆಯೊಂದು ಕೆಸರಿಗೆ ಬಿದ್ದಾಗ ಕಾಲು ಎತ್ತಲು ಆಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗೆಯೇ ವ್ಯಕ್ತಿಯೊಬ್ಬ ವ್ಯಸನಕ್ಕೆ ಬಿದ್ದಾಗ ತಲೆ ಎತ್ತಿ ನಡೆಯಲು ಕಷ್ಟವಾಗುತ್ತದೆ. ಮದ್ಯವರ್ಜನ ಶಿಬಿರಗಳ ಮೂಲಕ ಕೆಸರಿನಿಂದ ಮೇಲಕ್ಕೆತ್ತಿ ಬದುಕು ಬದಲಾವಣೆಗೆ ಅವಕಾಶ ಮಾಡಿಕೊಟ್ಟದ್ದನ್ನು ಶಾಶ್ವತವಾಗಿ ಉಳಿಸಬೇಕೆಂದ ಅವರು, ಪಾನಮುಕ್ತರಿಗೆ ನವಜೀವನದ ಬ್ಯಾಡ್ಜ್ ವಿತರಿಸಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್. ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವೇದಿಕೆಯ ನಿರ್ದೇಶಕ ವಿವೇಕ್ ವಿ. ಪಾಸ್, ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್, ಮಾಧವ, ಅಪ್ಪಣ್ಣ ಹೆಗ್ಡೆ ಕುಂದಾಪುರ, ಎಸ್. ಲಿಂಗಣ್ಣ ಪಾಳಹಳ್ಳಿ, ಹೆಚ್. ಶಿವಣ್ಣ, ಜಿ. ಧನಂಜಯ ಶ್ರೀರಂಗಪಟ್ಟಣ, ದಿನೇಶ್ ಆನಡ್ಕ, ಕಾರ್ಯಕರ್ತರಾದ ಭಾಸ್ಕರ್, ಗಣೇಶ್ ಆಚಾರ್ಯ ಇದ್ದರು.