[1]ಮಂಗಳೂರು: ಮಹಿಳೆಯೋರ್ವಳು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಸಂಜೆ ಉಳ್ಳಾಲ ಠಾಣಾ ವ್ಯಾಪ್ತಿಯ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.
ಕಂಕನಾಡಿ ಬೈಪಾಸ್ ರಸ್ತೆಯ ವಿಜಯ್ ಎಂಬುವರ ಪತ್ನಿ ತುಳಸಿ (51) ಆತ್ಮಹತ್ಯೆಗೆ ಶರಣಾದ ಮಹಿಳೆ. ಜೆಪ್ಪು ಸಮೀಪ ಬಸ್ಸಿನಿಂದ ಇಳಿದ ಮಹಿಳೆ ನೇತ್ರಾವತಿ ಸೇತುವೆವರೆಗೆ ನಡೆದುಕೊಂಡು ಬಂದಿದ್ದು, ಅಲ್ಲಿ ವ್ಯಾನಿಟಿ ಬ್ಯಾಗ್ ಹಾಗೂ ಚಪ್ಪಲಿಯನ್ನು ಇಟ್ಟು ನದಿಗೆ ಹಾರಿದ್ದಾರೆ ಎನ್ನಲಾಗಿದೆ.
ತುಳಸಿ ನದಿಗೆ ಹಾರುವುದನ್ನು ಕಂಡ ದ್ವಿಚಕ್ರ ಸವಾರರೊಬ್ಬರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬ್ಯಾಗಿನಲ್ಲಿ ಕಂಡು ಬಂದ ಗುರುತಿನ ಚೀಟಿ ಆಧಾರದಲ್ಲಿ ಅವರ ಮನೆಯವರನ್ನು ಸಂಪರ್ಕಿಸಿದ್ದಾರೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
[2]ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದರಿಂದಾಗಿ ವಾಹನಗಳನ್ನು ಸೇತುವೆಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಹೋಗುತ್ತಿದ್ದ ಕಾರಿನ ಹಿಂಬದಿಗೆ ಅದೇ ದಾರಿಯಲ್ಲಿ ಉಳ್ಳಾಲಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಘಟನೆಯೂ ನಡೆಯಿತು. ಇದರಿಂದ ಕಾರಿನ ಹಿಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.