[1]ಮಂಗಳೂರು: ಮಂಗಳೂರು ವಿದ್ಯುರ್ ಶಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) 2015-16ರಲ್ಲಿ ಆರ್ಥಿಕ ವ್ಯವಹಾರದಲ್ಲಿ ನಷ್ಟಗಳಿಕೆಯನ್ನು ಕಡಿಮೆ ಮಾಡುವುದರಲ್ಲಿ ಯಶಸ್ವಿಯಾಗಿರುವುದರಿಂದ ದೇಶದಲ್ಲಿ 6ನೇ ಪ್ರಮುಖ ಕಂಪೆನಿಯಾಗಿ ಸಾಧನೆ ಮಾಡಿದೆ ಎಂದು ಮೆಸ್ಕಾಂ ಆಡಳಿತ ನಿರ್ದೇಶಕ ಚಿಕ್ಕ ನಂಜಪ್ಪ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. 2007-08ರಲ್ಲಿ ಆರ್ಥಿಕ ವ್ಯವಹಾರದಲ್ಲಿ ಶೇ.13.71 ನಷ್ಟ ಅನುಭವಿಸುತ್ತಿದ್ದ ಮೆಸ್ಕಾಂನ ನಷ್ಟದ ಪ್ರಮಾಣ ಇದೀಗ ಶೇ.11.50 ಪ್ರಮಾಣಕ್ಕೆ ಇಳಿಕೆಯಾಗಿದೆ ಎಂದರು.
ಮೆಸ್ಕಾಂನಿಂದ ಶೀಘ್ರದಲ್ಲಿ (ದಿನದ 24 ಗಂಟೆ) ನಿರಂತರ ಗ್ರಾಹಕ ಸೇವೆ ನೀಡುವ ಕಾಲ್ ಸೆಂಟರ್ ಆರಂಭಿಸಲಾಗುವುದು ಎಂದ ಅವರು, ಈ ಕೇಂದ್ರವನ್ನು ನಗರದ ಕದ್ರಿಯಲ್ಲಿ ಆರಂಭಿಸಲಾಗುವುದು. ಕೇಂದ್ರ ಆರಂಭಗೊಂಡ ಬಳಿಕ ಇಲ್ಲಿ ಗ್ರಾಹಕರ ದೂರುಗಳನ್ನು ಒಂದೇ ಕಡೆ ಸ್ವೀಕರಿಸಿ ಪರಿಹಾರಕ್ಕೆ ಕ್ರಮ ಕೈ ಗೊಳ್ಳಲಾಗುತ್ತದೆ. ದೂರುಗಳ ಬಗ್ಗೆ ಇತರ ಸಬ್ ಸ್ಟೇಷನ್ಗಳ ಮೂಲಕ ಪರಿಹರಿಸುವ ಕ್ರಮವನ್ನು ಕೇಂದ್ರದ ಮೂಲಕ ನಿರ್ವಹಿಸಲಾಗುವುದು. ಶೀಘ್ರದಲ್ಲಿ ಈ ಕೇಂದ್ರ ಆರಂಭವಾಗಲಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಮೆಸ್ಕಾಂನ ತಾಂತ್ರಿಕ ವಿಭಾಗದ ಮುಖ್ಯಸ್ಥ ಡಿ.ಆರ್.ಶ್ರೀನಿವಾಸ್, ರಾಮಕೃಷ್ಣ ಉಪಸ್ಥಿತರಿದ್ದರು.