ಮಂಗಳೂರು : ಇಂದು ದೇಶದಾದ್ಯಂತ ನಾಗರ ಪಂಚಮಿಯನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ‘ನಾಗರ ಪಂಚಮಿ’ ಕೃಷಿ ಮತ್ತು ಮಳೆಯಿಂದಾಗಿ ಸ್ಥಗಿತಗೊಂಡಿದ್ದ ನಮ್ಮ ಎಲ್ಲ ಶ್ರದ್ಧೆಯ, ಉತ್ಸಾಹದ ಆಚರಣೆಗಳೆಲ್ಲ ಮತ್ತೆ ಆರಂಭವಾಗುವ ಮೊದಲ ಹಬ್ಬ. ನಾಡಿಗೆ ದೊಡ್ಡ ಹಬ್ಬವೆಂದೇ ಪ್ರತೀತಿ. ಆಟಿ ತಿಂಗಳ ಅಮಾವಾಸ್ಯೆ ಯಂದು ಕಹಿ ಮದ್ದು ಸೇವಿಸಿ ನಮ್ಮ ಮೂಲದ ನಾಗನ ಸ್ಥಾನಕ್ಕೆ ಹೊರಡಲು ಸಿದ್ಧತೆಗಳಾಗುತ್ತವೆ. ಮುಂದೆ ಐದನೇ ದಿನ ‘ನಾಗರಪಂಚಮಿ’ ಅಥವಾ ‘ನಾಗ ಪಂಚಮಿ’.
ನಾಗನಿಗೆ ಹಲವು ನಾಮಗಳಿವೆ, ಉಭಯ ಜೀವಿಗಳಲ್ಲಿ ಹೆಚ್ಚು ಶಕ್ತಿ ಹೊದಿರುವ ಇವನಿಗೆ ನಾಗರಾಜ, ವಾಸುಕಿ, ಅನಂತ, ಶೇಷಾ, ಪದ್ಮಾ, ಕಾರ್ಕೋಟಕ, ದೃತರಾಷ್ಟ್ರ, ಸಂಕಪಾಳ, ಪಿಂಗಳ ಮೊದಲಾದ ಹೆಸರುಗಳಿಂದ ದೇಶದ ವಿವಿದೆಡೆ ಕರೆಯಲ್ಪಡುತ್ತಾನೆ. ತುಪ್ಪ, ಹಾಲು, ಸಕ್ಕರೆ, ಜೀನು, ಸಿಯಾಳದ ನೀರು, ಅರಶಿನ ಮೊದಲಾದುವುಗಳಿಂದ ನಾಗನಿಗೆ ತಂಪೆರೆದು, ತನಿಹರಕೆಗೊಂಡು, ‘ತನಿ’ಯನ್ನು ಬಯಸುವ ಈ ಆಚರಣೆಯಲ್ಲಿ ನಾಗ-ಭೂಮಿ-ಕೃಷಿಯ ಆರಾಧನಾ ಆಶಯವಿದೆ. ಬೇಶ ತಿಂಗಳಲ್ಲಿ (ವೃಷಭಮಾಸ) ಕೃಷಿಗೆ ತೊಡಗವ ಮುನ್ನ ‘ಬೇಸದ ತನು’ ಎಂದು ನಾಗನನ್ನು ಪೂಜಿಸುವ ನಾವು ಭೂಮಿಗೂ ತಂಪೆರೆಯತ್ತೇವೆ. ನಾಗ-ಭೂಮಿಯ ಸಂಬಂಧವನ್ನು ಸ್ಮರಿಸುತ್ತೇವೆ. ನಾಗ ಭೂಮಿ ಪುತ್ರನೆಂದೇ ಸ್ವೀಕಾರ. ಭೂಮಿಯಿಂದ ಪಡೆಯುವ ಕೃಷಿ ಸಮೃದ್ಧಿಗಾಗಿ ತಾಯಿಯನ್ನೂ ಮಗನನ್ನು ತೃಪ್ತಿ ಪಡಿಸುವ ನಮ್ಮ ಸಂಪ್ರದಾಯ ಪ್ರಾಚೀನವಾದುದು. ಕೃಷಿಗೆ ಮೊದಲೊಮ್ಮೆ ತನು – ತಂಬಿಲ ಸೇವೆ ಸಲ್ಲಿಸುವ ನಾವು, ಈಗ ಕೃಷಿ ಪರಿ ಸಮಾಪ್ತಿಯಲ್ಲಿ ಕೃಷಿ ಸಮೃದ್ಧಿಗಾಗಿ ತನು ಎರೆಯುತ್ತೇವೆ.
ಇಂದು ದ.ಕ ಜಿಲ್ಲೆಯ ನಾಗರಧನೆಯ ಆದಿ ಸ್ಥಳ ಕುಕ್ಕೆ ಸುಬಹ್ಮಣ್ಯದಲ್ಲಿ ಹಾಗೂ ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ, ಮಂಜೇಶ್ವರದ ಅನಂತಪದ್ಮನಾಭ ದೇವಸ್ಥಾನದಲ್ಲಿ ನಾಗಾರಾಧನೆಗಳು ಬೆಳಗ್ಗಿನಿಂದಲೀ ನಡೆಯುತ್ತಿದೆ. ಸರ್ಪ ಸಂಸ್ಕಾರ, ನಾಗ ತಂಬಿಲ, ಸರ್ಪ ಸಂಕಲ್ಪ, ಆಶ್ಲೇಷ ಬಲಿ ಮೊದಲಾದ ವಿಶೇಷ ಪೂಜೆಗಳು ನಡೆಯುತ್ತಿದೆ.
ವಿಶೇಷವೆಂದರೆ ಹಿಂದೂಗಳ ಪ್ರತಿ ಕುಟುಂಬಕ್ಕೊಂದು ನಾಗಬನಗಳಿವೆ. ನಮ್ಮ ಪೂರ್ವಜರು ಪ್ರಕೃತಿಯ ಮಡಿಲಲ್ಲಿ ಪ್ರಕೃತಿಜನ್ಯ ಪ್ರತ್ಯಕ್ಷ – ಪರೋಕ್ಷ ಶಕ್ತಿಗಳನ್ನು ಆರಾಧಿಸತೊಡಗಿದರು. ಇಂತಹ ನೂರಾರರು ಕಲ್ಪನೆ – ಅನುಸಂಧಾನ ವಿಧಾನಗಳಲ್ಲಿ, ಪೂಜೆ – ಸಬ್ಬಗಳಲ್ಲಿ, ಉಪಾಸನಾ ವೈವಿಧ್ಯದಲ್ಲಿ ಪ್ರಕೃತಿಯೊಂದಿಗೆ ಕೂಡಿ ಬಾಳಿದ ಮನೋಧರ್ಮವಿದೆ. ಕೃತಜ್ಞತಾರ್ಪಣೆಯ ವಿನೀತ ಭಾವವಿದೆ. ಭಯದಿಂದಲೋ ಉಪಕೃತರಾಗುತ್ತೇವೆ ಎಂಬ ಭಕ್ತಿಯಿಂದಲೋ ಆರಾಧನೆಗಳು ಸಾಗಿಬಂದಿವೆ. ನಾಗಪೂಜೆ ಭಯದ ಮೂಲದಿಂದ ಹುಟ್ಟಿರಬಹುದಾದರೂ ನಾಗ-ಮಾನವ ಸಂಬಂಧ ಪ್ರಾಚೀನವಾದುದು, ಗಾಢವಾದುದು. ಇಲ್ಲಿ ‘ಮೂಲ’ದ ಅನಾವರಣವಿದೆ. ಮೂಲದ ನಾಗನೆಂಬ ರೂಢಿಯ ಮಾತಿಗೆ ಪುಷ್ಠಿ ದೊರೆಯುವಂತಹ ವಿವರ ಲಭಿಸುತ್ತವೆ. ಈ ಅವಲೋಕನ ನಮ್ಮ – ನಾಗ ಬಂಧುತ್ವವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಒಂದು ರೀತಿಯಲ್ಲಿ ‘ಮೂಲದವನೆಂದೊ, ಪೂರ್ವಜನೆಂದೊ’ ಎಂದು ತಿಳಿಯುವಂತೆ ಮಾಡಿಬಿಡುತ್ತದೆ. ಆದುದರಿಂದ ನಾಗನ ಆರಾಧನೆಯಲ್ಲಿ ಕೇವಲ ಉತ್ಸಾಹ, ನಂಬಿಕೆ, ಶ್ರದ್ಧೆ, ಭಕ್ತಿಗಿಂತಲೂ ಭಿನ್ನವಾದ, ಅವರ್ಣನೀಯವಾದ ಆನಂದವಿದೆ. ಕೃತಾರ್ಥಭಾವವಿದೆ.
ನಾಗನಕಟ್ಟೆ ನಾಗ ಸಂಬಂಧಿಯಾದ ಭೂಮಿ ಅಥವಾ ಪರಿಸರವೂ ಪ್ರಧಾನವಾಗುತ್ತದೆ. ನಾಗನ ವಾಸ ಸ್ಥಾನ ‘ಬನ’ ತಂಪಾದ ವಾತಾವರಣವನ್ನು ಬಯಸುವ ನಾಗನಿಗೆ ಮಾನವ ತೋರಿಸಿದ ಅತವಾ ನೆಲೆಗೊಳಿಸಿದ ಸ್ಥಾನ ಒತ್ತೂತ್ತಾಗಿ ಮರಗಳು ಬೆಳೆದಿರುವ ವನ. ಸ್ಥಾನಕೊಟ್ಟದ್ದು ವಿಶಾಲ ಹರವುಳ್ಳ ಮರಗಳ ಬುಡ. ನಾಗ-ವೃಕ್ಷ ಅವಳಿ ಚೇತನಗಳೆಂಬ ಚಿಂತನೆಯೂ ಇಲ್ಲಿಂದಲೇ ಪಡಿಮೂಡಿರಬೇಕು. ಆದರೆ ಈ ಪ್ರದಾನ ಮತ್ತು ಮೂಲ ಚಿಂತನೆ ಎಷ್ಟು ಪ್ರಸ್ತುತವೋ ಅಷ್ಟೇ ಆತ್ಮೀಯವಾದುದು.
ನಮ್ಮ ಪಿತೃಗಳಂತೆ ನಾಗ ಶವಕ್ಕೆ ಸಂಸ್ಕಾರ ಮಾಡುತ್ತೇವೆ. ಸಂತಾನ, ಸಂಪತ್ತು, ಕೃಷಿ ಸಮೃದ್ಧಿ ನೀಡುವುದರೊಂದಿಗೆ ಮಹಾವ್ಯಾಧಿಗಳ ನಿವಾರಕನೆಂದು ನಂಬಿ ‘ನಮ್ಮ’ ನಾಗನನ್ನು ಆರಾಧಿಸುತ್ತೇವೆ.
ಕಾಲ ಬದಲಾದಂತೆ ಆರಾಧನಾ ವಿಧಾನಗಳು ಬನದಿಂದ ಅಥವಾ ಪ್ರಕೃತಿಯ ಮಡಿಲಿನಿಂದ ಹೊರಗೆ ಬಂತು. ಸಮೂಹದಲ್ಲಿ ಪೂಜೆಗೊಳ್ಳುತ್ತಿದ್ದ ನಾಗ ಒಂದು ಹಂತದಲ್ಲಿ ಕೆಲವೆಡೆ ಪ್ರತ್ಯೇಕಗೊಂಡ ನಾಗಸ್ಥಾನ, ಬ್ರಸ್ಮಸ್ಥಾನಗಳು ಮೂಲದ ಸಮೂಹ ಪೂಜೆಗೆ ಕುರುಹಾಗಿ ನಮ್ಮ ಪರಿಸರದಲ್ಲಿವೆ.
ಸಮೂಹದಲ್ಲಾದರೆ ಧಕ್ಕೆಬಲಿ – ಬ್ರಹ್ಮಮಂಡಲ, ಒಬ್ಬನಿಗಾದರೆ ನಾಗಮಂಡಲ ಸೇವೆಗಳು ರೂಢಿಗೆ ಬಂಧುವು. ‘ನಾಗಬ್ರಹ್ಮ’ ಚಿಂತನೆ ಪ್ರತ್ಯೇಕವಾಗಿ ಗಮನ ಸೆಳೆಯುತ್ತಾ ಇಂದಿಗೂ ಅಭೇದ್ಯವಾಗಿಯೇ ಉಳಿಯಿತು. ಅಂತೂ ನಮ್ಮ ನಾಗ ಸ್ವತಃ ಎಷ್ಟು ಜನಪ್ರೀತನೋ ಸಮೂಹದಲ್ಲಿಯೂ ಅಷ್ಟೇ ಪ್ರಸಿದ್ಧನು. ನಾಗ-ದುರ್ಗಮ್ಮ, ನಾಗ-ಸುಬ್ರಹ್ಮಣ್ಯ, ನಾಗ-ಶಿವ, ನಾಗ-ವಿಷ್ಣು ಸಮೀಕರಣಗಳು ವೈದಿಕದ ಕೊಡುಗೆಗಳಾದುವು. ವೈದಿಕ ಪೂರ್ವದಲ್ಲಿ (ವೈದಿಕವು ಕರೆನಾಡಿಗೆ ಬರುವ ಮೊದಲು) ಇದ್ದ ಸ್ಥಿತಿಯೇ ವಿಕಾಸಗೊಂಡು, ಸ್ಥಿತ್ಯಂತರದಿಂದಾಗಿ ಸಮಾಗಮಗೊಂಡು ಇಂದು ಕಾಣುವ ವೈಭವೀಕೃತ ನಾಗ ಆರಾಧನಾ ಮಾರ್ಗ ಚರಿತ್ರೆಯಾಗುತ್ತಿದೆ.
‘ತನು’ ಎರೆದು ತಂಬಿಲ (ಪೂಜೆ) ಮಾಡಿಸಿ (ತನು ಮಯಿಪಾದ್ ತಂಬಿಲ ಕಟ್ಟಾದ್) ಸರಳ, ಮುಗ್ಧ ಸೇವೆ ಸಲ್ಲಿಸುತ್ತಿದ್ದ ನಾವು ಇಂದು ನಾಗನಿಗೆ ವೈದಿಕ -ಅವೈದಿಕ ಸಮ್ಮಿಶ್ರವಾದ ಬಹುವೆಚ್ಚದ ‘ನಾಗಮಂಡಲ’ ಸೇವೆ ಸಲ್ಲಿಸುತ್ತೇವೆ. ಈ ನಾಗಸೇವಾ ವಿಧಾನ ಎಷ್ಟು ವೈಭವದಿಂದ ಅಲಂಕರಿಸಲ್ಪಟ್ಟರೂ ಇಂದಿಗೂ ನಾಗ ತನು ಎರೆಯುವ ತಂಬಿಲ ಕಟ್ಟಿಸುವ ತನ್ನ ಪ್ರಸ್ತುತತೆ ಉಳಿಸಿಕೊಂಡಿದೆ. ನಾಗಬನಗಳು ಉಳಿದುಕೊಂಡಿವೆ ಉಳಿದವು ದೇವಳ, ಗುಡಿ, ಮಂದಿರ, ವೇದಿಕೆಗಳಾಗಿ ಬದಲಾಗಿವೆ.