[1]ಮಂಗಳೂರು: ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿಯೋರ್ವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಗಾಯತ್ರಿ ನಾಯಕ್ ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ. ಇವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಯೋಗೀಶ್ ಎಂಬವರಿಂದ ತಮ್ಮ ಕಚೇರಿಯಲ್ಲಿ 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಗಾಯತ್ರಿಯನ್ನು ವಶಕ್ಕೆ ಪಡೆದರು.
ಯೋಗೀಶ್ ಅವರಿಗೆ ದೊರೆತ ಭೂ ಪರಿಹಾರದ ಮೊತ್ತದಲ್ಲಿ 1.6 ಲಕ್ಷ ರೂ. ಲಂಚ ನೀಡಬೇಕೆಂದು ಗಾಯತ್ರಿ ನಾಯಕ್ ಬೇಡಿಕೆ ಮುಂದಿಟ್ಟಿದ್ದರು. ಅದರಂತೆ ಈಗಾಗಲೇ 1.30 ಲಕ್ಷ ರೂ.ಗಳನ್ನು ಯೋಗೀಶ್ ಹಸ್ತಾಂತರಿಸಿದ್ದರು. ಆದರೂ ಬೇಡಿಕೆ ಕುಗ್ಗದಿದ್ದಾಗ ಎಸಿಬಿ ಪೊಲೀಸರಿಗೆ ಯೋಗೀಶ್ ದೂರು ನೀಡಿದ್ದರು. ಆದರೆ, ಇಂದು 20 ಸಾವಿರ ರೂ.ಗಳನ್ನು ಗಾಯತ್ರಿ ನಾಯಕ್ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗಾಯತ್ರಿ ನಾಯಕ್ ಈ ಹಿಂದೆ ಕುಂದಾಪುರ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಅವರನ್ನು ರಾಷ್ಟ್ರೀಯ ಹೆದ್ದಾರಿ 169ರ ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಅಲ್ಲದೇ ಕೆಲ ಸಮಯದ ಹಿಂದೆ ಅವರಿಗೆ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮದ ಕಾರ್ಯನಿರ್ವಹಣಾಧಿಕಾರಿಯ ಹೆಚ್ಚುವರಿ ಹುದ್ದೆಯನ್ನೂ ನೀಡಲಾಗಿತ್ತು.