- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೇಜವಾಬ್ದಾರಿ ಹೇಳಿಕೆ ನೀಡುವವರು ಮೊದಲು ಅಧಿಕಾರ ಬಿಟ್ಟು ಹೋಗಲಿ: ಸಿಎಂಗೆ ಪೂಜಾರಿ ತರಾಟೆ

janardhana-poojary-01 [1]ಮಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇತ್ತೀಚೆಗೆ ನಿಧನರಾದ ಸಚಿವ ಮಹಾದೇವ ಪ್ರಸಾದ್ ಅವರ ಪತ್ನಿ ಅಥವಾ ಮಗನಿಗೆ ಟಿಕೆಟ್ ನೀಡಬೇಕು. ಅನುಕಂಪದ ಮತವಾದರೂ ಬರುತ್ತವೆ. ಅದನ್ನು ಬಿಟ್ಟು ಅವರ ಕ್ಷೇತ್ರದಲ್ಲಿ ಬೇರೆ ಯಾರನ್ನಾದರೂ ನಿಲ್ಲಿಸಿದರೆ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರತಿಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವತ್ತೂ ಬೆಲೆ ಕೊಡುವುದಿಲ್ಲ. ಆದರೆ, ಈ ಮಾತಿನ ವಿರುದ್ಧ ಸಿಎಂ ನಡೆದರೆ ಅವರ ರಾಜಕೀಯ ಜೀವನವೂ ಅಂತ್ಯವಾಗುವುದು ಗ್ಯಾರಂಟಿ ಎಂದರು.

ಮಹದೇವ ಪ್ರಸಾದ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಆಚರಿಸುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಇಂದು ಸಂಜೆ ಎನ್ಆರ್‌ಐ ಬಿ.ಆರ್.ಶೆಟ್ಟಿ ಮಗಳ ಮದುವೆಯಲ್ಲಿ ಭಾಗವಹಿಸಲು ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಬರುತ್ತಿದ್ದಾರೆ. ಸಿಎಂಗೆ ಬುದ್ಧಿ ಇಲ್ಲ ಅಂತ ಸಾಬೀತುಪಡಿಸಲು ಇದಕ್ಕಿಂತ ಒಳ್ಳೆ ನಿದರ್ಶನ ಬೇಕೆ ಎಂದರು.

ಮುಖ್ಯಮಂತ್ರಿಯವರಿಗೆ ಮದುವೆಗೆ ಬರಲು ವಿಶೇಷ ವಿಮಾನ ನೀಡಿದ್ದು ಯಾರು? ಬಿ.ಆರ್. ಶೆಟ್ರೇ? ಒಂದು ವೇಳೆ ಅವರೇ ಕೊಟ್ಟಿದ್ದರೆ ಅದು ಭ್ರಷ್ಟಾಚಾರವಲ್ಲವೇ? ಸರಳತೆಯ ಬಗ್ಗೆ ಮಾತನಾಡುವ ಸಿಎಂ ಬಸ್ಸಿನಲ್ಲಿ ಬರಲಿ ಎಂದು ಜನಾರ್ದನ ಪೂಜಾರಿ ಕುಟುಕಿದರು.

janardhana-poojary [2]ಎತ್ತಿನಹೊಳೆ ಯೋಜನೆಯ ಅನುಷ್ಠಾನ ಮಾಡಿಯೇ ಸಿದ್ಧ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರು, ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಸಿದ್ದರಾಮಯ್ಯ ಅವರಿಗೆ ಮಹಾದಾಯಿ ಯೋಜನೆಯಾಗಲೀ, ಘಟಪ್ರಭಾ ಯೋಜನೆಯನ್ನು ಯಾಕೆ ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ. 200 ಟಿಎಂಸಿ ಯೋಜನೆ ನೀರು ಎತ್ತಿನಹೊಳೆ ಯೋಜನೆಯಿಂದ ಸಿಗುತ್ತದೆ ಅಂತ ಹೇಳುವ ಸರಕಾರ ಯಾವ ಅಧ್ಯಯನ ಕೈಗೊಂಡಿದೆ? ಅದರ ವರದಿ ನೀಡಲಿ ಎಂದರು. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವವರು ಮೊದಲು ಅಧಿಕಾರ ಬಿಟ್ಟು ಹೋಗಲಿ. ಕರ್ನಾಟಕವಾದರೂ ಉಳಿಯುತ್ತದೆ ಎಂದರು.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ಸಂದರ್ಭ ಹೆಣ್ಮಕ್ಕಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಲಘುವಾಗಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡ ಪೂಜಾರಿ, ಇಂಥವರನ್ನು ತಾನು ಸಿಎಂ ಆಗಲಿ ಎಂದು ಹೇಳಿದ್ದೆ. ತಾವಾಡಿದ ಮಾತಿಗೆ ಈಗ ತಮಗೇ ಪಶ್ಚಾತಾಪವಾಗುತ್ತಿದೆ. ತಮ್ಮ ಮಾತನ್ನು ವಾಪಾಸು ತೆಗೆದುಕೊಳ್ಳದಿದ್ದರೆ ರಾಜ್ಯದ ಜನತೆ ತನಗೆ ಚಪ್ಪಲಿಯೇಟು ನೀಡುವುದು ಗ್ಯಾರಂಟಿ ಎಂದರು.

ಜಿಲ್ಲೆಗೆ ಬೆಂಕಿ ಇಡಲು ಹೊರಟ ಸಂಸದ ನಳಿನ್ ಕುಮಾರ್ ಕಟೀಲ್ ಅಮಲಿನಲ್ಲಿ ಮಾತನಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಪೂಜಾರಿ, ನೀವು ಹಾಗೇನಾದರೂ ಮಾಡಿದರೆ ಐಪಿಸಿ ಸೆಕ್ಷನ್ ಪ್ರಕಾರ ನಿಮ್ಮ ಮೇಲೆ ಕೊಲೆ ಮಾಡಿದ ಪಾಪ ಬರುತ್ತದೆ ಎಂಬ ಅರಿವು ನಿಮಗಿಲ್ಲ ಎಂದು ಹೇಳಿದರು.

ಕಾನೂನಿಗಿಂತ ಯಾರೂ ದೊಡ್ಡವಲ್ಲ. ತಾನೊಬ್ಬ ವಕೀಲನಾಗಿ ನಿಮಗೆ ಸಲಹೆ ನೀಡುತ್ತೇನೆ. ಈ ಜಿಲ್ಲೆಯ ಪ್ರತಿ ಮನೆಗೆ ಹೋಗಿ ಕಾಲು ಮುಟ್ಟಿ ಕ್ಷಮೆಯಾಚಿಸಿ. ಆಗ ಜನರು ನಿಮ್ಮನ್ನು ಕ್ಷಮಿಸುತ್ತಾರೆ ಎಂದರು.

janardhana-poojary [3]