[1]ಮಂಗಳೂರು: 1870ರಲ್ಲಿ ಸ್ಥಾಪನೆಯಾದ 147 ವರ್ಷ ಹಳೆಯದಾದ ಬ್ರಾಹ್ಮಣ ಹೆಣ್ಣು ಮಕ್ಕಳ ಶಾಲೆ ಮತ್ತು ಶಾಲೆಯ ಮೈದಾನವನ್ನು ಕಾನೂನು ಉಲ್ಲಂಘಿಸಿ ರೆಸ್ಟೋರೆಂಟ್ ಮಾಡಲು ಮುಂದಾಗಿರುವುದರ ವಿರುದ್ಧ ಮಾನವ ಹಕ್ಕು ಹೋರಾಟಗಾರರು ಮತ್ತು ಆರ್. ಟಿ. ಐ ಕಾರ್ಯಕರ್ತರು ಶಾಲೆ ಇದ್ದ ಜಿಹೆಚ್ಎಸ್ ರಸ್ತೆಯ ಆಶೀರ್ವಾದ್ ಕಟ್ಟಡದ ಹಿಂಭಾಗ ಪ್ರತಿಭಟನೆ ನಡೆಸಿದರು.
ಬ್ರಾಹ್ಮಣ ಹೆಣ್ಣು ಮಕ್ಕಳ ಶಾಲೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದು, ನಂತರ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಯನ್ನು ಮುಚ್ಚಲಾಗಿತ್ತು. ಈ ಶಾಲೆಯನ್ನು ಪುನರಾರಂಭಿಸುವುದು ನಮ್ಮ ಉದ್ದೇಶ. ಶಾಲೆಗಿರುವ ಕಾನೂನು ದಕ್ಷಿಣ ಕರ್ನಾಟಕ ಎಜ್ಯುಕೇಶನ್ ಆ್ಯಕ್ಟ್ ಪ್ರಕಾರ ಶಾಲೆಯನ್ನು ಮುಚ್ಚಿದಲ್ಲಿ ಅದರ ಆಸ್ತಿಯನ್ನು ಸರ್ಕಾರಕ್ಕೆ ಒಪ್ಪಿಸಬೇಕು.
2006ರಲ್ಲಿ ಮುಚ್ಚಿದ ಶಾಲೆಯ ಜಾಗವನ್ನು ಉದ್ಯಮಿಯೊಬ್ಬರು ಬಾಡಿಗೆ ಆಧಾರದಲ್ಲಿ ಪಡೆದು ಲಕ್ಷಾಂತರ ರೂ. ವೆಚ್ಚದಲ್ಲಿ ನವೀಕರಣ ಮಾಡಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.
ಶಾಲೆಯ ಜಾಗದ ಮಾಲೀಕತ್ವದ ಕುರಿತು ಬಾಸೆಲ್ ಮಿಷನ್ ಮತ್ತು ಸಿಎಸ್ಐ ನಡುವೆ ವಾದವಿದೆ. ಪ್ರಕರಣ ಸರ್ವೋಚ್ಛ ನ್ಯಾಯಾಲಯದಲ್ಲಿದ್ದು, ಜಾಗವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕೆಂದು ನ್ಯಾಯಾಲಯ ಮೂರು ವರ್ಷಗಳ ಹಿಂದೆ ಆದೇಶ ನೀಡಿದೆ. ಆದರೆ ಇವೆಲ್ಲವನ್ನು ಗಾಳಿಗೆ ತೂರಿ ಟ್ರೇಡ್ ಲೈಸೆನ್ಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇಲ್ಲಿ ಒಟ್ಟು 61 ಸೆಂಟ್ಸ್ ಜಾಗವಿದ್ದು, ದಕ್ಷಿಣದ ಹಿಂದೂಸ್ತಾನ್ ಮಿಷನ್ ಟ್ರಸ್ಟ್ ಹೆಸರಿನಲ್ಲಿದೆ. ಅದರಲ್ಲಿ 23 ಸೆಂಟ್ಸ್ ಜಾಗ ಭೂ ಪರಿವರ್ತನೆಗೊಂಡಿದೆ. ಈ ಕುರಿತು ಕ್ರಮಕ್ಕೆ ದ. ಕ. ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹನೀಫ್ ಸಾಹೇಬ್ ಪಾಜಪಳ, ಪ್ರಮೀಳಾ ಮೆಂಡೊನ್ಸಾ, ಅಬ್ದುಲ್ ಕರೀಂ, ಶರೀಫ್, ಫಾರೂಕ್ ಸಾಹೇಬ್, ಮೊಹಮ್ಮದ್ ತಮೀಂ ಮೊದಲಾದವರಿದ್ದರು.