[1]ಸುಳ್ಯ: ಅಡಿಕೆ ವ್ಯಾಪಾರಿಯೊಬ್ಬರು ತಮ್ಮ ಕಾರಿನಲ್ಲಿ ಬರುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಪಿಸ್ತೂಲ್ ಮತ್ತು ತಲವಾರ್ ತೋರಿಸಿ ಕಾರಲ್ಲಿದ್ದ 5ಲಕ್ಷ ರೂ ಹಾಗೂ ಮೊಬೈಲ್ಗಳನ್ನು ದೋಚಿ ಪರಾರಿಯಾಗಿರುವ ಘಟನೆ ಐವರ್ನಾಡಿ ಬಳಿ ನಡೆದಿದೆ.
ಅಡಿಕೆ ವ್ಯಾಪಾರಿ ಅಬ್ದುಲ್ ಖಾದರ್ ಎಂಬುವರು ತನ್ನ ಮಿತ್ರ ಶಫೀಕ್ ಮತ್ತು ಕೆಲಸದವರೊಂದಿಗೆ ಇಂದು ಬೆಳಗ್ಗೆ ಬೆಳ್ಳಾರೆಯಿಂದ ಗುತ್ತಿಗಾರಿಗೆ ತನ್ನ ಕಾರಲ್ಲಿ ಹೊರಟಿದ್ದರು. ಈ ವೇಳೆ ಕಾರು ಐವರ್ನಾಡು ತಲುಪುತ್ತಿದ್ದಂತೆ ಹಿಂದಿನಿಂದ ಹಿಂಬಾಲಿಸಿಕೊಂಡು ಬಂದ ಕಾರೊಂದು ಇವರ ಕಾರಿನ ಮುಂದೆ ಬಂದು ಅಡ್ಡ ನಿಂತಿದೆ.
ಕಾರಿನಿಂದ ಇಳಿದ ನಾಲ್ವರು ಪಿಸ್ತೂಲ್ ಮತ್ತು ತಲವಾರ್ ತೋರಿಸಿ ಕಾರಲ್ಲಿದ್ದ ನಗದು, ಚೆಕ್ ಬುಕ್, ನಾಲ್ವರ ಮೊಬೈಲ್ಗಳನ್ನು ಕಿತ್ತುಕೊಂಡು ಹಿಂತುರುಗಿ ಬೆಳ್ಳಾರೆ ಕಡೆಗೆ ಹೋದರೆನ್ನಲಾಗಿದೆ. ವಿಷಯ ತಿಳಿದ ಸುಳ್ಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.