[1]ಮಂಗಳೂರು: ಇನ್ನೊವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮನೆಯವರನ್ನು ಕಟ್ಟಿ ಹಾಕಿ ನಿಧಿಗಾಗಿ ಶೋಧ ನಡೆಸಿದ ಘಟನೆ ಇಂದು ನಸುಕಿನ ಜಾವ ಬಂಟ್ವಾಳ ತಾಲೂಕಿನ ವಿಟ್ಲದ ಕರೋಪಾಡಿಯಲ್ಲಿ ನಡೆದಿದೆ.
ಕರೋಪಾಡಿಯ ವಿಘ್ನರಾಜ್ ಭಟ್ ಎಂಬುವರ ಮನೆಗೆ ನುಗ್ಗಿದ್ದ 9 ಜನರ ತಂಡ ಮನೆಯವರಲ್ಲಿ ನಿಧಿ ಎಲ್ಲಿದೆ ಎಂದು ವಿಚಾರಿಸಿ ಅವರನ್ನು ಕಟ್ಟಿ ಹಾಕಿದೆ. ಅವರ ಮನೆಯ ಹೊರಭಾಗದಲ್ಲಿ ಮನೆಯ ಗೇಟಿನ ಬಳಿ ನೆಲವನ್ನು ಅಗೆದು ನಿಧಿಗೆ ಹುಡುಕಾಡಿದ್ದಾರೆ. ಆದರೆ ನಿಧಿ ಸಿಗದೆ ವಾಪಸ್ ತೆರಳಿದ್ದಾರೆ.
ದುಷ್ಕರ್ಮಿಗಳು ಕನ್ನಡ, ಹಿಂದಿ, ಮಲಯಾಳಿ ಭಾಷೆಯನ್ನು ಮಾತನಾಡುತ್ತಿದ್ದರು ಎಂದು ವಿಘ್ನರಾಜ್ ಭಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.