[1]ಮಂಗಳೂರು : ರಂಬಾರೂಟಿ ಚಿತ್ರ ಯಶಸ್ವಿಯಾದ ಬಳಿಕ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ನಿರ್ದೇಶನದ ‘ತೊಟ್ಟಿಲ್’ ತುಳು ಚಲನ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಜನವರಿ 22 ರಂದು ಪುರಭವನದಲ್ಲಿ ನಡೆಯಿತು.
ಜಿವೈಎಸ್ಪಿ ಫೇಸ್ ಬುಕ್ ಗ್ರೂಪ್ ಇವರು ಪುರಭವನದಲ್ಲಿ ಆಯೋಜಿಸಿದ ಗಾಣಿಗ ಸಂಗಮ 2017 ಕಾರ್ಯಕ್ರಮದಲ್ಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಪುಟಾಣಿಗಳಿಂದಲೇ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಸಿನಿಮಾವನ್ನು ತಾಯಿ ಸೆಂಟಿಮೆಂಟ್ ಆಧಾರ ಇಟ್ಟುಕೊಂಡು ನಿರ್ಮಿಸಲಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಚಿತ್ರಕ್ಕೆ ಡೋಲ್ವಿನ್ ಕೊಳಲಗಿರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಲ್ಲಾ ಹಾಡುಗಳು ಕೇಳುಗರ ಮನ ಮುಟ್ಟುವಂತಹದ್ದು. ಸಿನಿಮಾದ ಕೆಲಸಗಳು ಪೂರ್ತಿಯಾಗಿದ್ದು, ಸೆನ್ಸಾರ್ ಅಂಗಳದ ಮುಂದೆ ಚಿತ್ರ ಬಂದು ನಿಂತಿದೆ ಸೆಂಟಿಮೆಂಟ್ ಜೊತೆ ಹಾಸ್ಯದ ಹೊನಲು ಹರಿಯಲಿದೆ ಎಂದು ನಿರ್ದೇಶಕ ಪ್ರಜ್ವಲ್ ಕುಮಾರ್ ಈ ಸಂದರ್ಭ ಹೇಳಿದರು.
ಚಿತ್ರದ ನಿರ್ಮಾಪಕರಾದ ಪ್ರಕಾಶ್ ಕಾಬೆಟ್ಟು, ರಿಚರ್ಡ್ ಡಿ ಕುನ್ಹಾ, ನಾಯಕ ನಟ ವಿಜೇತ್ ಸುವರ್ಣ, ಖಳ ನಟ ರಾಜೇಶ್ ಸ್ಕೈಲಾರ್ಕ್, ಬಾಲನಟ ಪ್ರತೀಕ್ ಶೆಟ್ಟಿ, ಸಹ ನಟರಾದ ಸಂದೇಶ್ ಕೋಟ್ಯಾನ್, ಚೈತ್ರ, ಸೂರಜ್, ಹರೀಶ್ ಶೆಟ್ಟಿ, ಸಾಹಿತ್ಯ ಬರೆದ ಕೀರ್ತನ್ ಭಂಡಾರಿ ಕುಳಾಯಿ, ದೀಪಕ್ ಎಸ್ ಕೋಟ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಅನುರಾಗ ಬಂಗೇರ ನಡೆಸಿ ಕೊಟ್ಟರು.
ಚಿತ್ರದ ಬಗ್ಗೆ
ರಂಬಾರೂಟಿ ಚಿತ್ರದ ಮೂಲಕ ಯುವಜನತೆಗೆ ಹೊಸ ಮಾದರಿಯ ಸಿನಿಮಾ ಹಾದಿಯನ್ನು ಬಿಟ್ಟುಕೊಟ್ಟ ಪ್ರಜ್ವಲ್ಗೆ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಓಪೆರಾ ಡ್ರೀಮ್ ಬ್ಯಾನರ್ನಲ್ಲಿ ಈ ಚಿತ್ರದ ನಿರ್ಮಾಣ ಕೆಲಸ ನಡೆದಿದೆ. ನಿರ್ಮಾಪಕರಾಗಿ ಪ್ರಕಾಶ್ ಕಾಬೆಟ್ಟು, ರಿಚರ್ಡ್ ಡಿ ಕುನ್ಹಾ ಇದ್ದಾರೆ. ಚಿತ್ರಕ್ಕೆ ಸಂಗೀತ ಡೋಲ್ವಿನ್ ಕೊಳಲಗಿರಿ ನೀಡಿದ್ದಾರೆ. ಚಿತ್ರದಲ್ಲಿ ವಿಜೇತ್ ಸುವರ್ಣ, ಸುರೇಖಾ ಭಟ್ ಸೇರಿದಂತೆ ಕರಾವಳಿ ರಂಗಭೂಮಿಯ ಬಹುತೇಕ ಮಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಕಳ,ಉಡುಪಿ, ಹಾಸನ, ಮಂಗಳೂರು ಸೇರಿದಂತೆ ನಾನಾಕಡೆಗಳಲ್ಲಿ ಚಿತ್ರ ಚಿತ್ರೀಕರಣ ನಡೆದಿದೆ.