[1]ಮೂಡುಬಿದಿರೆ: ವಿವಿಧತೆಯಲ್ಲಿ ಏಕತೆಯನ್ನು ಸಾದಿಸಿರುವ ನಮ್ಮ ದೇಶ ಕಲೆ ಸಂಸ್ಕೃತಿಗೆ ವಿಶ್ವದಾತ್ಯಂತ ಪ್ರಸಿದ್ಧಿ. ನಾವು ವಾಸಿಸುವ ಈ ಭೂಮಿ ತಪೋಭೂಮಿ ಇದ್ದಂತೆ. ಇಂತಹ ಭೂಮಿಯಲ್ಲಿ ನೆಲೆಸಿರುವ ನಾವೆಲ್ಲರೂ ಪುಣ್ಯವಂತರು. ಇಂತಹ ಸಾವಿರಾರು ವರ್ಷಗಳ ಇತಿಹಾಸ ಇರುವ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಆಳ್ವಾಸ ನುಡಿಸಿರಿ ವಿರಾಸತ್ ಚನ್ನರಾಯಪಟ್ಟಣ ಘಟಕದ ಅಧ್ಯಕ್ಷ ಶಾಸಕ ಸಿ ಎನ್ ಬಾಲಕೃಷ್ಣ ನುಡಿದರು.
ಆಳ್ವಾಸ ನುಡಿಸಿರಿ ವಿರಾಸತ್ ಘಟಕ ಚನ್ನರಾಯಪಟ್ಟಣದಲ್ಲಿ ಶನಿವಾರ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಆಳ್ವಾಸ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಲೆ ಸಂಸ್ಕೃತಿಯನ್ನು ಮರೆತರೆ ನಾವು ನಮ್ಮನ್ನೆ ಮರೆತ ಹಾಗೆ ಎಂದು ತಿಳಿಸಿದ ಅವರು, ಈ ನಾಡಿನ ಸಂಸ್ಕೃತಿ, ಕಲೆ ಸಾಹಿತ್ಯ ವನ್ನು ಉಳಿಸಿ ಬೆಳೆಸುವಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಈ ರಾಷ್ಟ್ರದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹರ್ಷ ವ್ಯಕ್ತ ಪಡಿಸಿದರು. ಹಿಮಪಾತದಿಂದ ಗಡಿಯಲ್ಲಿ ನಿಧನ ಹೊಂದಿದ ಸೈನಿಕ ಸಂದೀಪ ಶೆಟ್ಟಿ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ನೀಡಲಿಎಂದು ಕೋರಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಮತಾನಾಡುತ್ತ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಜನೆಯೊಂದಿಗೆ, ಸಾಂಸ್ಕೃತಿಕ ಮೌಲ್ಯವನ್ನು ತುಂಬುತ್ತಾ, ಗ್ರಾಮೀಣ ಭಾಗದ ಜನರಲ್ಲೂ ಈ ನೆಲದ ಸೊಗಡಿನ ಅರಿವನ್ನು ಮೂಡಿಸುವ ಕೆಲಸ, ಆಳ್ವಾಸ ಸಾಂಸ್ಕೃತಿಕ ವೈಭವದ್ದಾಗಿದೆ ಎಂದರು.
ದೇಶ, ವಿದೇಶದಲ್ಲೂ ಬೇಡಿಕೆ ಹೊಂದಿರುವ ಆಳ್ವಾಸ ಸಾಂಸ್ಕೃತಿಕ ವೈಭವ ಕೇವಲ ಮನೋರಂಜನೆಯನ್ನೆ ನೀಡದೇ ಈ ನೆಲದ ಸಾಂಸ್ಕೃತಿಕ ಲೋಕದ ಅನಾವರಣ ಮಾಡುತ್ತದೆ ಎಂದರು. ಮೂಡಬಿದಿರೆಯಲ್ಲಿ ನಡೆಯುವ ಆಳ್ವಾಸ ನುಡಿಸಿರಿ, ವಿರಾಸತ ನಂತಹ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುತ್ತಿರುವುದೇ ಕಲೆಯನ್ನು ಅಸ್ವಾದಿಸುವ ಜನ ಕ್ಷೀಣಿಸಿಲ್ಲ ಎಂಬುದಕ್ಕೆ ಸಾಕ್ಷಿ ಎಂದರು. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಮೂಲಕ ಹೆಚ್ಚಿನ ಪ್ರಾಮುಖ್ಯತೆ ನೀಡಿ ಮಾತೃ ಭಾಷೆಯ ಉಳಿವಿಗೆ ಸಾದ್ಯವದಷ್ಟು ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಬೇಕು.
ಎಚ್ ಡಿ ದೇವಗೌಡರು ಮುಖ್ಯ ಮಂತ್ರಿಯಾಗಿದ್ದಾಗ 592 ಮೊರಾರ್ಜಿ ದೇಸಾಯಿ ಶಾಲೆಗಳನ್ನು ತೆರೆದು, ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದರು. ಆದರೆ ನಂತರ ಬಂದ ಸರ್ಕಾರಗಳು ಆ ಶಾಲೆಗಳನ್ನು ಜಿಲ್ಲೆಗೆ ಒಂದು ಶಾಲೆ ಎಂಬ ನಿಯಮ ತಂದು, ಕನ್ನಡ ಮಾಧ್ಯಮ ಶಾಲೆಗಳ ಅವನತಿಗೆ ಕಾರಣವಾದವು ಎಂದು ದೂರಿದರು. ಈ ನಾಡಿನ ಪ್ರತಿಯೊಬ್ಬ ಸಿರಿವಂತ ಒಂದೊಂದು ಮಾದರಿ ಕನ್ನಡ ಮಾದ್ಯಮ ಶಾಲೆಯನ್ನು ಸ್ಥಾಪಿಸಿ, ಪೋಷಿಸಿದರೆ, ಕನ್ನಡ ಮಾಧ್ಯಮ ಶಾಲೆಗಳು ಈ ನಾಡಿನ ಶ್ರೇಷ್ಠ ವಿದ್ಯಾಸಂಸ್ಥೆಗಳಾಗುದರಲ್ಲಿ ಸಂಶಯವಿಲ್ಲ ಎಂದು ನುಡಿದರು.
ಕಾರ್ಯಯಕ್ರಮದ ಅಧ್ಯಕ್ಷತೆ ವಹಿಸದ್ದ ಪುರಸಭಾ ಅಧ್ಯಕ್ಷ ಕೆ ಜೆ ಸುರೇಶ ಮತನಾಡಿ, ಆಳ್ವಾಸ್ ವಿದ್ಯಾರ್ಥಿಗಳು ಯವುದೇ ಅಂತಾರಾಷ್ಟ್ರೀಯ ಕಲಾವಿದರಿಗೂ ಕಡಿಮೆ ಇಲ್ಲದಂತೆ ಕಲೆಯನ್ನು ಸಾಬೀತು ಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಹಾಸನ ವಿಧಾನ ಪರಿಷತ್ ಸದಸ್ಯ ಎಂ ಎ ಗೋಪಾಲ್ ಸ್ವಾಮಿ, ತಾಲೂಕು ಬಿಜೆಪಿ ಅದ್ಯಕ್ಷ ಶಿವನಂಜೇಗೌಡ, ಪರಿಸರವಾದಿ ಚ.ನಾ ಅಶೋಕ್, ಕುಸುಮಾ ಬಾಲಕೃಷ್ಣ ಉಪಸ್ಥಿತರಿದ್ದರು.
ಹಾಸನದಲ್ಲಿ ಸಾಂಸ್ಕೃತಿಕ ವೈಭವ
ಹಾಸನದಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಸಾಂಸ್ಕೃತಿಕ ವೈಭವವನ್ನು ನಗಾರಿ ಬಾರಿಸಿ ಹಾಸನ ಜಿಲ್ಲಾಧಿಕಾರಿ ಚೈತ್ರಾ ಉದ್ಘಾಟಿಸಿದರು.
ಶಾಸಕ ಹೆಚ್ ಎಸ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಆಳ್ವಾಸ ಶಿಕ್ಷಣ ಪ್ರತಿಷ್ಠಾನದ ಆದ್ಯಕ್ಷ ಡಾ ಮೋಹನ್ ಆಳ್ವ, ಹಾಸನ ನಗರ ಸಭೆ ಅಧ್ಯಕ್ಷ ಡಾ ಅನಿಲ್ ಕುಮಾರ್, ಆಳ್ವಾಸ ನುಡಿಸಿರಿ ವಿರಾಸತ್ ಹಾಸನ ಘಟಕದ ಅಧ್ಯಕ್ಷ ಡಾ ಪ್ರಸನ್ನ ನರಸಿಂಹ ರಾವ್, ಮಾಜಿ ಸಂಸದ ಜವರೇಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಕಲಗೋಡು ಮುಂತಾದವರು ಉಪಸ್ಥಿತರಿದ್ದರು.