[1]ಉಡುಪಿ: ಕರ್ನಾಟಕ ಮಧ್ವಾಚಾರ್ಯರಿಗೆ ಜನ್ಮಕೊಟ್ಟ ಪುಣ್ಯಭೂಮಿ. ದೇಶದ ನೈತಿಕ ಉದ್ಧಾರಕ್ಕಾಗಿ ಮಧ್ವರು ಜನ್ಮ ತಾಳಿದರು. ಮಧ್ವರ ಭಕ್ತಿ ಆಂದೋಲನ ನೆನೆದರೆ ಹೆಮ್ಮೆಯಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಜಗದ್ಗುರು ಮಧ್ವಾಚಾರ್ಯರ ಸಪ್ತ ಶತಮಾನೋತ್ಸವ ಅಂಗವಾಗಿ ಪ್ರಧಾನಿ ಮೋದಿ ಇಂದು ಭಾಷಣ ಮಾಡಿದರು. ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಮಧ್ವಾಚಾರ್ಯರ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಮಧ್ವಾಚಾರ್ಯರ ಗುಣಗಾನ ಮಾಡಿದರು. ಅಲ್ಲದೇ ದೇಶದ ಧಾರ್ಮಿಕ ಪರಂಪರೆಯ ಬಗ್ಗೆಯೂ ಮೋದಿ ವಿಸ್ತೃತ ಭಾಷಣ ಮಾಡಿದರು.
ಎಂಟರ ಹರೆಯದಲ್ಲೇ ಪೇಜಾವರ ಸ್ವಾಮೀಜಿಗಳು ಧೀಕ್ಷೆ ಪಡೆದರು. ಕಳೆದ ಎಂಟು ದಶಕಗಳ ಕಾಲ ದೇಶದ ಸೇವೆಯಲ್ಲಿ ಅವರು ತೊಡಗಿದ್ದಾರೆ. ಗೋ ರಕ್ಷಣೆಗೆ ಪೇಜಾವರ ಶ್ರೀಗಳ ಕೊಡುಗೆ ಅನನ್ಯ ಅಂತ ಮೋದಿ ಇದೇ ವೇಳೆ ಹೇಳಿದರು.
ಸ್ವತಃ ಬಂದು ಪೇಜಾವರ ಸ್ವಾಮೀಜಿ ಆಶೀರ್ವಾದ ಪಡೆಯಲು ಕಾತರನಾಗಿದ್ದೇನೆ. ಉಡುಪಿಗೆ ಬಂದಾಗ ಪೇಜಾವರ ಸ್ವಾಮೀಜಿಗಳಿಂದ ಕೃಷ್ಣನ ವರ್ಣನೆ ಕೇಳಿದ್ದೆ. ಉಡುಪಿಯ ಮಹಿಮೆ ಅಪಾರ. ಮಲಹೊರುವ ಪದ್ಧತಿಯನ್ನು ದೇಶದಲ್ಲೇ ಮೊದಲು ರದ್ದು ಮಾಡಿದ ಕೀರ್ತಿ ಉಡುಪಿಗಿದೆ. ಉಡುಪಿ ಸ್ವಚ್ಛ ನಗರದ ಕೀರ್ತಿಗೆ ಪಾತ್ರವಾಗಿದೆ ಎಂದು ತಿಳಿಸಿದರು.