ಮಂಗಳೂರು: ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು ಏರಿಸಿರುವುದರ ವಿರುದ್ಧ ರಸ್ತೆಯಲ್ಲಿಯೇ ಒಲೆ ಉರಿಸಿ, ಹಾಲು ಕುದಿಸಿ ಚಹಾ ಮಾಡಿ ಕುಡಿಯುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. `ಅಚ್ಚೇ ದಿನ್’ ಅಂದವರಿಂದಲೇ ಈಗ `ಕೆಟ್ಟ ದಿನ’ ಬರುತ್ತಿವೆ. ಅಡುಗೆ ಅನಿಲ ದರ ಸೇರಿದಂತೆ ಜನ ಬಳಕೆಯ ವಸ್ತುಗಳ ಬೆಲೆ ವಿಪರೀತವಾಗಿ ಏರುತ್ತಿದೆ. ಜನ ಸಾಮಾನ್ಯರ ಬದುಕು ದುಸ್ತರವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಚಾಲನೆ ನೀಡಿದ ದ. ಕ. ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಅಡುಗೆ ಅನಿಲ ದರ ಏರಿಸುವುದರ ಮೂಲಕ ಕೇಂದ್ರ ಸರ್ಕಾರ ಮಹಿಳೆಯರು ಕಣ್ಣೀರು ಸುರಿಸುವಂತೆ ಮಾಡಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಹಿಲ್ಡಾ ಆಳ್ವ, ಜೆಸಿಂತಾ ಡಿ. ಸೋಜ, ನಮಿತಾ ಮೊದಲಾದವರಿದ್ದರು.