[1]ಮಂಗಳೂರು : ಅಲೋಶಿಯಸ್ ಕಾಲೇಜಿನ ಬಳಿಯಿಂದ ಬಲ್ಮಠವರೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂದೆಯೇ ಆ್ಯಕ್ಟಿವಾದಲ್ಲಿ ಬಂದ ಯುವಕನೊಬ್ಬ ಹಾರ್ನ್ ಮಾಡಿ ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದ, ಕಣ್ಣ್ ಸನ್ನೆ ಮಾಡಿದ್ದ . ಆತ ಆಕೆಯನ್ನೇ ಹಿಂಬಾಲಿಸಿದಾಗ ಆಕೆ ಆತನ ಸ್ಕೂಟರ್ನ ಫೊಟೋ ತೆಗೆದಿದ್ದಳು. ಬಳಿಕ ಅದರಲ್ಲಿದ್ದ ನೋಂದಣಿ ಸಂಖ್ಯೆ ಆಧಾರದಲ್ಲಿ ಸ್ಕೂಟರ್ನ ಮಾಲೀಕತ್ವದ ವಿವರಗಳನ್ನು ಶೋಧಿಸಿ ಫೇಸ್ಬುಕ್ನಲ್ಲಿ ಹಾಕಿದ್ದಳು.
ರಶ್ಮಿ ಶೆಟ್ಟಿ ಬೌದ್ಧ ಧರ್ಮದ ಬಗ್ಗೆ ಎಂ.ಎ ಮಾಡುತ್ತಿದ್ದಾಳೆ . ಈಕೆಯ ಪೋಸ್ಟನ್ನು ಲೈಕ್ ಮಾಡಿದ ಮಿತ್ರರು , ಮಂಗಳೂರು ಪೊಲೀಸ್ ಕಮಿಷನರ್ ವಿಳಾಸವನ್ನೂ ಟ್ಯಾಗ್ ಮಾಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಪೊಲೀಸರೇ ಮಹಿಳಾ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಆಂಗ್ಲ ಭಾಷೆಯಲ್ಲಿ ”ನಿಮ್ಮಂಥ ಅನಾಗರಿಕರಿಗೆ ಈ ನಗರ, ರಸ್ತೆಗಳಲ್ಲಿ ಎಷ್ಟು ಅಧಿಕಾರವಿದೆಯೋ ಅಷ್ಟೇ ನನಗೂ ಇದೆ. ನಾನು ಹೆದರಿ ಮನೆಯಲ್ಲಿ ಕೂರುವ ಪ್ರಶ್ನೆಯೇ ಇಲ್ಲ. ನಾನು ಹೆದರಿ, ನಾಚಿಕೆಯಿಂದ ಮುದುಡಿಕೊಂಡಿರುತ್ತೇನೆ ಎಂದುಕೊಂಡಿದ್ದೀಯಲ್ಲವೇ?
ಒಂದು ವೇಳೆ ನಾನು ಯಾರಲ್ಲಾದರೂ ಈ ವಿಚಾರ ಹೇಳಿದರೂ ಅದನ್ನು ಸಾಬೀತುಪಡಿಸಲು ಅಸಾಧ್ಯ. ಜನ ನನ್ನ ಪರವಾಗಿ ಮಾತನಾಡಲಿಕ್ಕಿಲ್ಲ ಎಂದು ತಿಳಿದಿದ್ದೀಯಲ್ಲವೇ? ನನ್ನ ಪರವಾಗಿ ನಾನೇ ಇದ್ದೇನೆ. ನಿಮ್ಮಂಥ ನೂರು ಮಂದಿ ಬಂದರೂ ನಮ್ಮನ್ನು ಹೆದರಿಸುವುದು ಸಾಧ್ಯವಿಲ್ಲ. ನನ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಲು ಬಂದರೆ ತಿರುಗಿ ಬೀಳುತ್ತೇನೆ. ನೀನು ನನ್ನನ್ನು ಮುಟ್ಟಲು ಬರಬೇಕಿತ್ತು, ನನ್ನ ಹಿಮ್ಮಡಿಗಳಿಂದ ನಿಮ್ಮ ಮುಖ ಮೂತಿ ಜಜ್ಜಿ ಹಾಕುತ್ತಿದ್ದೆ”. ಇವು ರಶ್ಮಿ ಶೆಟ್ಟಿ ಫೇಸ್ಬುಕ್ನಲ್ಲಿ ಬರೆದುಕೊಂಡ ಎಚ್ಚರಿಕೆ ಸಾಲುಗಳು.