- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಣ್ಣಾ ಹಜಾರೆ ಸತ್ಯಾಗ್ರಹವನ್ನು ಬೆಂಬಲಿಸಿ ಬೀದಿಗಿಳಿದ ವಿದ್ಯಾರ್ಥಿಗಳು

Anna Hajare students suport/ವಿದ್ಯಾರ್ಥಿಗಳ ಬೆಂಬಲ [1]

ಮಂಗಳೂರು : ಅಣ್ಣಾ ಹಜಾರೆ ಅವರು ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ನಡೆಸುತ್ತಿರುವ ಸತ್ಯಾಗ್ರಹವನ್ನು ಬೆಂಬಲಿಸಿ ಹಾಗೂ ಅವರ ಬಂಧನವನ್ನು ಖಂಡಿಸಿ ಬುಧವಾರ ಮಂಗಳೂರಿನ ವಿವಿಧ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೃಹತ್‌ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮತ್ತು ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ, ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌, ಆಲ್‌ ಇಂಡಿಯಾ ಕ್ರಿಶ್ಚಿಯನ್‌ ಯೂನಿವರ್ಸಿಟಿ ಸ್ಟೂಡೆಂಟ್ಸ್‌ ಯೂನಿಯನ್‌ (ಎಐಸಿಯುಎಸ್‌) ಸೈಂಟ್‌ ಎಲೋಶಿಯಸ್‌ ಕಾಲೇಜು ವಿದ್ಯಾರ್ಥಿ ಸಂಘ ಮತ್ತು ಇತರ ಸಂಘಟನೆಗಳು ಸೇರಿದ್ದವು.

ವಿದ್ಯಾರ್ಥಿಗಳ ಮೆರವಣಿಗೆಯ ಪರಿಣಾಮವಾಗಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿದ್ಯಾರ್ಥಿಗಳು ಎಂ.ಜಿ. ರಸ್ತೆ. ಕೆ.ಆರ್‌.ಆರ್‌. ರಸ್ತೆ, ಬಂಟ್ಸ್‌ ಹಾಸ್ಟೆಲ್‌ ವೃತ್ತ, ಜ್ಯೋತಿ ವೃತ್ತ, ಹಂಪನಕಟ್ಟೆ ಸಿಗ್ನಲ್‌ ವೃತ್ತ, ಕ್ಲಾಕ್‌ಟವರ್‌ ಸರ್ಕಲ್‌, ಎ.ಬಿ. ಶೆಟ್ಟಿ ವೃತ್ತದ ಮೂಲಕ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದರು. ೫ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Anna Hajare students suport/ವಿದ್ಯಾರ್ಥಿಗಳ ಬೆಂಬಲ [2]

ಭ್ರಷ್ಟಾಚಾರ ನಿಯಂತ್ರಣಕ್ಕೆ ಪ್ರಬಲ ಜನಲೋಕಪಾಲ ಮಸೂದೆ ಜಾರಿ, ಈ ಮಸೂದೆಯಲ್ಲಿ ಪ್ರಧಾನಿ ಮತ್ತು ನ್ಯಾಯಾಂಗ ವ್ಯವಸ್ಥೆ ಒಳ ಪಡ ಬೇಕು, ಅಣ್ಣಾ ಹಜಾರೆ ಅವರನ್ನು ಗೌರವಯುತವಾಗಿ ಬಿಡುಗಡೆ ಮಾಡುವುದು ಮತ್ತು ಅವರ ಬೇಡಿಕೆಗಳನ್ನು ತತ್‌ಕ್ಷಣ ಈಡೇರಿಸುವುದು, ಸ್ವಿಸ್‌ ಬ್ಯಾಂಕ್‌ ಮತ್ತು ಇತರ ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ವಾಪಸ್‌ ತಂದು ಅದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸ ಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಅಣ್ಣಾ ಹಜಾರೆ ಅವರಿಗೆ ಸತ್ಯಾಗ್ರಹ ನಡೆಸಲು ಅನುಮತಿ ನೀಡ ಬೇಕು, ಅಣ್ಣಾ ಮತ್ತವರ ಬೆಂಬಲಿಗರ ಮೇಲೆ ಹಾಕಿರುವ 107 ಕೇಸುಗಳನ್ನು ಹಿಂತೆಗೆದುಕೊಳ್ಳ ಬೇಕು, ಪ್ರಬಲ ಲೋಕಪಾಲ ಮಸೂದೆ ಶೀಘ್ರ ಜಾರಿ, ಅಣ್ಣಾ ಅವರನ್ನು ಬಂಧಿಸಿದ ಪೊಲೀಸ್‌ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಅಮಾನತು ಹಾಗೂ ಈ ಒಟ್ಟು ವಿದ್ಯಮಾನಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಸಮಸ್ತ ಸ್ವಾಭಿಮಾನಿ ಭಾರತೀಯರಲ್ಲಿ ಕ್ಷಮೆ ಯಾಚಿಸ ಬೇಕು ಎಂಬ ಬೇಡಿಕೆಗಳನ್ನು ಸೂಚಿಸಿದರು.

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸಲಹೆಗಾರ ದಿನಕರ ಶೆಟ್ಟಿ ,ಸಂಘದ ನಾಯಕರಾದ ಬೋರಿಸ್‌ ಬ್ರೆಗ್ಸ್‌, ಶೋಭಿತ್‌ ಶೆಟ್ಟಿ, ಸುರೇಂದ್ರ ಸಾಗರ್‌, ನಿತಿನ್‌ ರೆಬೆಲ್ಲೊ, ಸಮರ್ಥ್ ಉಳ್ಳಾಳ್‌, ಚಂದ್ರಕಾಂತ ಎನ್‌., ಅವಕೇಶ್‌ ಕುಮಾರ್‌ ಪಾಂಡೆ, ಕುಶಾಲ್‌ ಶೆಟ್ಟಿ, ಸಂದೀಪ್‌, ಸಚಿನ್‌ ಎಲ್‌. ಮೋರೆ, ಜ್ವಾಲನ್‌ ಪಿರೇರಾ, ಜೋಯಿಲಾ ರೊಡ್ರಿಗಸ್‌, ರಚನಾ, ಡೊಲ್ವಿನ್‌ ತೋಮಸ್‌, ಅರುಣ್‌, ಮೋಹನ್‌ ರಾಜ್‌, ಪ್ರಜ್ವಲ್‌ ಬಿ., ಸುಮಂತ್‌ ಎಸ್‌., ಮಂಜುನಾಥ್‌, ಪ್ರಸನ್ನ, ವಿದ್ಯಾಧರ್‌, ಪವನ್‌, ಚಿರಂಜೀವಿ, ವೀಣಾಧರ್‌ ರಾವ್‌, ಕೆ.ಜೆ. ಪ್ರಕಾಶ್‌ ಕೌಶಿಕ್‌, ಉತ್ತಮ್‌ ಆಳ್ವ, ಶಿಫಲ್‌ ರಾಜ್‌, ನೇಮಿರಾಜ್‌ ಶೆಟ್ಟಿ, ಕಾರ್ತಿಕ್‌ ಶೆಟ್ಟಿ, ಗುರುರಾಜ್‌ ಎಮ್ಮೆಕೆರೆ ಅವರು ಪ್ರತಿಭಟನಾ ರ್ಯಾಲಿಯ ನೇತೃತ್ವ ವಹಿಸಿದ್ದರು.

ಎ.ಬಿ.ವಿ.ಪಿ. ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ವಿಭಾಗ ಪ್ರಮುಖ್‌ ಹಾಗೂ ವಿ.ವಿ. ಸಿಂಡಿಕೆಯಟ್‌ ಸದಸ್ಯ ರವಿಚಂದ್ರನ್‌, ಜಿಲ್ಲಾ ಸಂಚಾಲಕ ಮಹೇಶ್‌, ತಾಲೂಕು ಸಂಚಾಲಕ ಸಚಿನ್‌, ವಿದ್ಯಾರ್ಥಿನಿ ಪ್ರಮುಖ್‌ ರಶ್ಮಿ, ಅಕ್ಷತಾ, ನಿತೇಶ್‌, ಪ್ರಮೋದ್‌, ಚಿನ್ಮಯ, ವಿನಯ ಹೊರಟ್ಟಿ, ವಿನಯ್‌ ಜಾದವ್‌, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವಿಕ್ರಮ್‌ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಎರಡು ಕಡೆಗಳಲ್ಲಿ ಪ್ರತ್ಯೇಕವಾಗಿ ಪ್ರತಿಭಟನಾ ಸಭೆಗಳು ಜರಗಿದವು. ಸರ್ವ ಕಾಲೇಜು ವಿದ್ಯಾರ್ಥಿ ಸಂಘ (ಎ.ಸಿ.ಎಸ್‌.ಎ.), ಎ.ಐ.ಸಿ.ಯು.ಎಸ್‌. ಮತ್ತು ಸೈಂಟ್‌ ಎಲೋಶಿಯಸ್‌ ಕಾಲೇಜು ವಿದ್ಯಾರ್ಥಿ ಸಂಘದ ಸಂಯುಕ್ತ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಗೇಟ್‌ ಬಳಿ ಹಾಗೂ ಎ.ಬಿ.ವಿ.ಪಿ. ವತಿಯಿಂದ ಹ್ಯಾಮಿಲ್ಟನ್‌ ವೃತ್ತದ ಬಳಿ ಪ್ರತಿಭಟನೆ ನಡೆಸಿತು.

ವಿದ್ಯಾರ್ಥಿಗಳ ಒಂದು ಗುಂಪು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಿತು. ಅಪರ ಜಿಲ್ಲಾಧಿಕಾರಿ ಕಾವೇರಪ್ಪ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಇನ್ನೊಂದು ಗುಂಪಿನ ಮನವಿ ಸ್ವೀಕರಿಸಿದರು.