ಮಂಗಳೂರು : ದ.ಕ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಮಂಗಳೂರು ತಾಲೂಕು ಕಚೇರಿಗೆ ಹಾಗೂ ವಿವಿಧ ಇಲಾಖೆಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡತಗಳು ವಿಲೇವಾರಿಯಾಗದೇ ಬಾಕಿ ಇರುವುದನ್ನು ಪರಿಶೀಲಿಸಿದ ಅವರು ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಂಡರು, ಯಾವುದೇ ಕಡತಗಳನ್ನು ಹೆಚ್ಚು ದಿನ ಕಚೇರಿಯಲ್ಲಿ ಉಳಿಸದೇ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು.
ಡಿ.ವಿ. ಸದಾನಂದ ಗೌಡರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಮಂಗಳೂರಿನ ಮೊದಲ ಭೇಟಿಯಲ್ಲಿ ಸರಕಾರಿ ಕಚೇರಿಗಳಲ್ಲಿ ಯಾವುದೇ ರೀತಿಯ ಕಡತಗಳನ್ನು 15 ದಿನಗಳೊಳಗೆ ಇತ್ಯರ್ಥಪಡಿಸಬೇಕೆಂದು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಲೆಮಾರ್ ದಿಢೀರ್ ದಾಳಿ ನಡೆಸಿ, ಅಧಿಕಾರಿಗಳನ್ನು ವಿಚಾರಿಸಿದರು.
ಸಾರ್ವಜನಿಕರ ಕಡತಗಳ ವಿಲೇವಾರಿ 15 ದಿನಗಳಿಗಿಂತ ಹೆಚ್ಚು ಆದ ದೂರು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು.ವಿನಾ ಕಾರಣ ನಾಗರಿಕರನ್ನು ಪೀಡಿಸಿದರೆ ಅವರನ್ನು ಅಮಾನತುಗೊಳಿಸುವಂತಹ ಶಿಸ್ತುಕ್ರಮಕ್ಕೆ ಮುಂದಾಗಬೇಕಾಗುತ್ತದೆ.ಯಾವುದೇ ಕಾರಣಕ್ಕೂ ಕಡತ ವಿಲೇವಾರಿಯಲ್ಲಿ ದೂರು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.