ಉಡುಪಿ: ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಗರದ ಮಸೀದಿ ರಸ್ತೆಯಲ್ಲಿರುವ ಐರೋಡಿ ಜುವೆಲ್ಲರ್ ಮೇಲೆ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಬೈಕ್ನಲ್ಲಿ ಬಂದ ಯುವಕರು ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಧರಿಸಿದ್ದರು. ಒಬ್ಬ ಬೈಕ್ನಲ್ಲಿದ್ದರೆ ಇನ್ನೊಬ್ಬ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ ತಡೆಯಲು ಯತ್ನಿಸಿದ ಕಾವಲುಗಾರ ವಿಠಲ ಎಂಬವರಿಗೂ ಗುಂಡು ಹಾರಿಸಿದ ಎನ್ನಲಾಗಿದೆ.
ಘಟನೆಯಲ್ಲಿ ಒಳಗಿನ ಸಿಬಂದಿಗಳಿಗಾಗಲೀ, ಕಾವಲುಗಾರನಿಗಾಗಲೀ ಯಾವುದೇ ಅಪಾಯವಾಗಲಿಲ್ಲ. ಕಾವಲುಗಾರ ಬಗ್ಗಿದ ಕಾರಣ ಗುಂಡಿನೇಟಿನಿಂದ ಪಾರಾದ ಎನ್ನಲಾಗಿದೆ. ಪಿಸ್ತೂಲಿನಿಂದ ಹಾರಿಸಿದ ಗುಂಡಿನ ಏಟು ಗೋಡೆಗೆ ತಾಗಿದ್ದು ಗುಂಡು ಪೊಲೀಸರಿಗೆ ಸಿಕ್ಕಿದೆ. ಆರೋಪಿಗಳಲ್ಲಿ ಒಬ್ಬ ಬಿಳಿ ಶೂ, ಟೀಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದ ಎನ್ನಲಾಗಿದೆ.
ಆರೋಪಿಗಳು ನಂತರ ಬೈಕ್ನಲ್ಲಿ ಪಕ್ಕದಲ್ಲಿರುವ ಶಾಲೆಯತ್ತ ಹೋಗಿ ಬಳಿಕ ಮಣಿಪಾಲಕ್ಕೆ ಹೋದರು ಎಂದು ಪೊಲೀಸರು ಹೇಳಿದ್ದಾರೆ. ಜುವೆಲ್ಲರ್ನಲ್ಲಿ ಸಿಸಿಟಿವಿ ಇಲ್ಲದಿರುವುದು ಅಪರಾಧಿಗಳನ್ನು ಪತ್ತೆ ಹಚ್ಚಲು ತೊಡಕಾಗಬಹುದು ಎಂದು ಹೇಳಲಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಇದು ಜುವೆಲ್ಲರ್ ಮಾಲಕರನ್ನು ಗುರಿಯಾಗಿಸಿ ಮಾಡಿದ ದಾಳಿಯೆಂದು ಸ್ಥಳಿಯರು ವಿವರಿಸಿದ್ದು ನಿಜಾಂಶ ತನಿಖೆಯಿಂದ ತಿಳಿದುಬರಬೇಕಾಗಿದೆ.ಶನಿವಾರ ಮುಖ್ಯಮಂತ್ರಿಗಳು ಉಡುಪಿಗೆ ಬರುತ್ತಿರುವ ಕಾರಣ ಈ ಘಟನೆಯಿಂದ ಇನ್ನಷ್ಟು ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.