[1]ಮಂಗಳೂರು: ಕೊಡಿಯಾಲ್ ಬೈಲ್ನಲ್ಲಿರುವ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಪುತ್ತೂರು ಮುಕ್ರಂಪಾಡಿಯ ರವಿಕುಮಾರ್ (28) ಎಂಬಾತನನ್ನು ಬರ್ಕ್ ಪೊಲೀಸರು ಬಂಧಿಸಿದ್ದಾರೆ.ಆರೋಪಿಯಿಂದ 2,800 ರೂ. ಬೆಲೆಯ 115 ಗ್ರಾಂ. ಗಾಂಜಾ ಮತ್ತು 1,000 ರೂ.ಬೆಲೆಯ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾಪತ್ತೆಯಾಗಿದೆ.
ಕಾರಾಗೃಹದ ಬಳಿ ಸುಳಿದಾಡುತ್ತಿದ್ದ ಈತನನ್ನು ಸಂಶಯದಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದನ್ನು ಕೇರಳದ ಗಡಿ ತಲಪಾಡಿಯಿಂದ ಮಾರಾಟಕ್ಕೆ ತಂದಿರುವುದಾಗಿ ಆರೋಪಿ ರವಿ ಕುಮಾರ್ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಹಳೆ ಪ್ರಕರಣವೊಂದರ ಆರೋಪಿಯಾಗಿರುವ ಈತ 17 ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಎರಡು ಕಳವು ಪ್ರಕರಣ, ಗ್ರಾಮಾಂತರ ಪೊಲೀಸ್ ಠಾಣೆ, ಮಂಗಳೂರಿನ ಬಂದರು ಮತ್ತು ಬರ್ಕ್ ಠಾಣೆಗಳಲ್ಲಿ ತಲಾ ಒಂದು ಹಲ್ಲೆ ಪ್ರಕರಣ, ಕದ್ರಿ ಠಾಣೆಯಲ್ಲಿ ಗಾಂಜಾ ಪ್ರಕರಣ ದಾಖಲಾಗಿವೆ.